ಕುಷ್ಟಗಿ ಯಲಬುಣಚಿಯಲ್ಲಿ ಶುಕ್ರವಾರ ಹಾವು ಕಡಿತ ಜಾಗೃತಿ ದಿನದಲ್ಲಿ ತಜ್ಞ ವೈದ್ಯರು ಜನರಿಗೆ ಮಾಹಿತಿ ನೀಡಿದರು
ಕುಷ್ಟಗಿ: ತಾಲ್ಲೂಕಿನ ಯಲಬುಣಚಿ ಗ್ರಾಮದಲ್ಲಿ ಶುಕ್ರವಾರ ಚಳಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ‘ಅಂತರರಾಷ್ಟ್ರೀಯ ಹಾವು ಕಡಿತ ಜಾಗೃತಿ ದಿನ’ದ ನಿಮಿತ್ತ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಾತನಾಡಿದ ಆಯುಷ್ ವೈದ್ಯಾಧಿಕಾರಿ ಡಾ.ರಮೇಶ, ‘ಹಾವು ಕಚ್ಚಿದಾಗ ಗಾಬರಿಯಾಗದೆ ಕಡಿತಕ್ಕೆ ಒಳಗಾದ ವ್ಯಕ್ತಿ ಸಮಾಧಾನದಿಂದ ಇರುವಂತೆ ಪ್ರೇರೇಪಿಸಬೇಕು. ಕಚ್ಚಿದ ಜಾಗವನ್ನು ಕತ್ತರಿಸುವುದು, ಬಿಗಿಯಾದ ಬಟ್ಟೆಯಿಂದ ಕಟ್ಟುವುದು, ಬಾಯಿಂದ ವಿಷ ಹೀರಲು ಯತ್ನಿಸುವುದು ಸರಿಯಲ್ಲ. ಹಾವು ಕಚ್ಚಿಸಿಕೊಂಡ ವ್ಯಕ್ತಿಯನ್ನು ನಡೆದಾಡಲು ಬಿಡಬಾರದು. ಮನೆ ಮದ್ದು ನೀಡುವುದು, ನಾಟಿ ಚಿಕಿತ್ಸೆ ಸೇರಿದಂತೆ ಯಾವುದೇ ರೀತಿಯ ಅಸುರಕ್ಷಿತ ವಿಧಾನಗಳನ್ನು ಅನುಸರಿಸುವ ಮೂಲಕ ಸಮಯವನ್ನು ವ್ಯರ್ಥಮಾಡದೆ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರೆ ಪ್ರಾಣಾಪಾಯದಿಂದ ಪಾರು ಮಾಡಲು ಸಾಧ್ಯ’ ಎಂದರು.
ಸಾಂಕ್ರಾಮಿಕ ರೋಗ ತಜ್ಞ ಡಾ.ಪ್ರಶಾಂತ ತಾಳಿಕೋಟಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶರಣಪ್ಪ ರಾಜೂರು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸೋಮಶೇಖರ ಮೇಟಿ, ಕುಷ್ಟರೋಗ ಮೇಲ್ವಿಚಾರಕ ಸಂಗಯ್ಯ ಕಂಠಿಮಠ, ಆರೋಗ್ಯ ನಿರೀಕ್ಷೆಣಾಧಿಕಾರಿ ವಿಜಯಕುಮಾರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.