ADVERTISEMENT

ವಿಶ್ವನಾಥ್‌ರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ: ಎಸ್‌.ಟಿ.ಸೋಮಶೇಖರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 14:33 IST
Last Updated 19 ಜೂನ್ 2020, 14:33 IST
ಎಚ್‌. ವಿಶ್ವನಾಥ್
ಎಚ್‌. ವಿಶ್ವನಾಥ್   

ಕೊಪ್ಪಳ: ‘ಕೃಷ್ಣ ಭೈರೇಗೌಡ ಅವರಿಗೆ ಯಾವುದೂ ಗೊತ್ತಿಲ್ಲ. ಪಕ್ಷಕ್ಕೆ ಬಂದಂತಹ 17 ಜನರಲ್ಲಿ 10 ಜನಕ್ಕೆ ಈಗಾಗಲೇ ಮಂತ್ರಿ ಮಾಡಲಾಗಿದೆ. ವಿಶ್ವನಾಥ ಅವರಿಗೆ ಹೊರತುಪಡಿಸಿ ಎಂ.ಟಿ.ಬಿ.ನಾಗರಾಜ್‌ ಮತ್ತು ಆರ್‌.ಶಂಕರ್‌ ಅವರಿಗೆ ಎಂಎಲ್‌ಸಿ ಮಾಡಲಾಗಿದೆ. ಮುನಿರತ್ನಂ ಹಾಗೂ ಪ್ರತಾಪಗೌಡ ಅವರು ಚುನಾವಣೆ ಎದುರಿಸುತ್ತಾರೆ. ಇವರಲ್ಲಿ ಯಾರಿಗೂ ನಡು ನೀರಿನಲ್ಲಿ ಕೈಬಿಡುವ ಪ್ರಶ್ನೆಯೇ ಇಲ್ಲ‘ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ ಹೇಳಿದರು.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಶ್ವನಾಥ ಅವರಿಗೂ ಅವಕಾಶ ಕೊಡ್ತೀವಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಇದಕ್ಕೆ ವಿಶ್ವನಾಥ ಅವರೂ ಒಪ್ಪಿದ್ದಾರೆ ಎಂದರು.

'ತಾಕತ್ತಿದ್ರೆ ಮೋದಿ ಅವರು, ದೇಶದಲ್ಲಿ ಚೀನಾ ವಸ್ತುಗಳ ಮಾರಾಟವನ್ನು ಬ್ಯಾನ್‌ ಮಾಡಲಿ' ಎಂಬ ಡಿ.ಕೆ.ಸುರೇಶ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು,ಡಿ.ಕೆ.ಸುರೇಶ್‌ ಅವರು ಕ್ಷೇತ್ರ ವ್ಯಾಪ್ತಿಯಲ್ಲಿ ಮಾತನಾಡಲಿ. ಅದನ್ನು ಬಿಟ್ಟು ಪ್ರಧಾನಿಗಳ ಬಗ್ಗೆ ಮಾತನಾಡುವುದು ಸರಿಯಲ್ಲ. ಮೋದಿ ತಾಕತ್ತು ಏನಿದೆ ಎಂಬುದು ಇಡೀ ವಿಶ್ವಕ್ಕೆ ಗೊತ್ತಿದೆ‘ ಎಂದರು.

ADVERTISEMENT

‘ರಾಜ್ಯದ ಬ್ಯಾಂಕುಗಳು ರೈತರಿಗೆ ಸಾಲ ನೀಡುತ್ತಿಲ್ಲ ಎಂಬ ಆರೋಪದ ಕುರಿತು ಉತ್ತರಿಸಿದ ಸಚಿವರು, ಎಲ್ಲ ಡಿಸಿಸಿ ಬ್ಯಾಂಕುಗಳಲ್ಲಿ ರೈತರಿಗೆ ಸಾಲ ನೀಡಲಾಗುತ್ತಿದೆ. ಈವರಗೆ ₹ 14,500 ಕೋಟಿ ಹೊಸ ಸಾಲಕ್ಕೆ ಚಾಲನೆ ನೀಡಲಾಗಿದೆ. 21 ಡಿಸಿಸಿ, ಅಪೆಕ್ಸ್‌ ಬ್ಯಾಂಕುಗಳು ರೈತರಿಗೆ ಹೊಸ ಸಾಲ ನೀಡಲು ಚಾಲನೆ ನೀಡಲಾಗಿದೆ‘ ಎಂದರು.

‘ಕೊಪ್ಪಳ ಜಿಲ್ಲೆಯಾಗಿ 20 ವರ್ಷ ಕಳೆದಿದೆ. ಆದರೂ ಕೂಡ ಆರ್‌ಡಿಸಿಸಿ ಬ್ಯಾಂಕ್‌ ರಾಯಚೂರಿನ ವ್ಯಾಪ್ತಿಯಲ್ಲೇ ಇರುವುದು ಗಮನಕ್ಕೆ ಬಂದಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಕೊಪ್ಪಳ ಮತ್ತು ರಾಯಚೂರಿನ ಜನಪ್ರತಿನಿಧಿಗಳು ಮತ್ತು ನಬಾರ್ಡ್ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು‘ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.