ADVERTISEMENT

ಅಳವಂಡಿ: ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಚುರುಕು

ತುಂಗಭದ್ರಾ ಜಲಾಶಯ: ಜಮೀನುಗಳಲ್ಲಿ ಇಳಿಕೆಯಾದ ನೀರು, ಉತ್ತಮ ಫಸಲಿನ ನಿರೀಕ್ಷೆ

ಜುನಸಾಬ ವಡ್ಡಟ್ಟಿ
Published 15 ಜನವರಿ 2023, 23:45 IST
Last Updated 15 ಜನವರಿ 2023, 23:45 IST
ಅಳವಂಡಿ ಸಮೀಪದ ತಿಗರಿ ಗ್ರಾಮದ ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿರುವುದು
ಅಳವಂಡಿ ಸಮೀಪದ ತಿಗರಿ ಗ್ರಾಮದ ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿರುವುದು   

ಅಳವಂಡಿ: ತುಂಗಭದ್ರಾ ಜಲಾಶಯದಲ್ಲಿ ನೀರು ಕಡಿಮೆ ಆದಾಗ ಹಿನ್ನೀರು ಪ್ರದೇಶದಲ್ಲಿ ಬಿತ್ತನೆ ಮಾಡಿ ಬೆಳೆ ಬೆಳೆಯುವುದು ವಾಡಿಕೆ. ಆದ್ದರಿಂದ ತುಂಗಭದ್ರಾ ನದಿ ತಟದಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದೆ.

ತುಂಗಭದ್ರಾ ಜಲಾಶಯದ ನೀರು ನಿಧಾನವಾಗಿ ಖಾಲಿಯಾಗುತ್ತಿದ್ದಂತೆ ಜಲಾಶಯದ ಹಿನ್ನೀರಿನ ಫಲವತ್ತಾದ ಪ್ರದೇಶದಲ್ಲಿ ತೇವಾಂಶ ಕಡಿಮೆಯಾಗುತ್ತದೆ. ಬಳಿಕ ರೈತರು ಈ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಆರಂಭಿಸುತ್ತಾರೆ.

ತುಂಗಭದ್ರಾ ನದಿ ತಟದಲ್ಲಿರುವ ಗ್ರಾಮಗಳಾದ ಕೇಸಲಾಪುರ, ನಿಲೋಗಿಪುರ, ಹಲವಾಗಲಿ, ಬೋಚನಹಳ್ಳಿ, ತಿಗರಿ, ನೀರಲಗಿ, ಕಾತರಕಿ, ಮತ್ತೂರ, ಹನಕುಂಟಿ ಗ್ರಾಮಗಳ ರೈತರು ಸೂರ್ಯಕಾಂತಿ, ಅಲಸಂದಿ, ಕಡಲೆ, ಉದ್ದು ಬಿತ್ತನೆಯ ಲ್ಲಿ ತೊಡಗಿದ್ದಾರೆ.

ADVERTISEMENT

ಪ್ರಸಕ್ತ ಸಾಲಿನಲ್ಲಿ ತುಂಗಭದ್ರಾ ಅಣೆಕಟ್ಟು ಸಂಪೂರ್ಣವಾಗಿ ಭರ್ತಿಯಾಗಿದ್ದ ಕಾರಣ ಹಿನ್ನೀರು ಪ್ರದೇಶದ ಜಮೀನುಗಳು ಸಂಪೂರ್ಣವಾಗಿ ಮುಳುಗಡೆಯಾಗಿದ್ದವು. ನಂತರ ಜಲಾಶಯದಿಂದ ಎಡದಂಡೆ ಹಾಗೂ ಬಲದಂಡೆ ಕಾಲುವೆಗೆ ನೀರು ಹರಿಸಲಾಯಿತು. ಬಳಿಕ ಜಮೀನುಗಳಲ್ಲಿ ನೀರು ಖಾಲಿಯಾಯಿತು.

ಹಿನ್ನೀರು ಪ್ರದೇಶದ ಸಾವಿರಾರು ಎಕರೆ ಜಮೀನುಗಳಲ್ಲಿ ರೈತರು ಬಿತ್ತನೆ ಕಾರ್ಯ ನಡೆಸಿ ಉತ್ತಮ ಫಸಲು ಪಡೆಯುತ್ತಿದ್ದಾರೆ. ಈ ಜಮೀನು ಫಲವತ್ತತೆಯಿಂದ ಕೂಡಿರುವುದರಿಂದ ರೈತರಿಗೆ ಖರ್ಚು ಕೂಡ ಕಡಿಮೆಯಾಗುತ್ತದೆ. ಕಡಿಮೆ ಖರ್ಚಿನಲ್ಲಿ ಉತ್ತಮ ಬೆಳೆ ಪಡೆಯುತ್ತಿದ್ದಾರೆ. ಇದರಿಂದ ರೈತರ ಆರ್ಥಿಕ ಪರಿಸ್ಥಿತಿ ಕೊಂಚ ಸುಧಾರಿಸುತ್ತಿದೆ. ಪ್ರಸಕ್ತ ವರ್ಷವೂ ಈ ಭಾಗದ ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.