ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಳೆ ಸೇತುವೆ
– ಪ್ರಜಾವಾಣಿ ಚಿತ್ರ
ಗಂಗಾವತಿ: ‘ದೇಶದ ಬಹುತೇಕ ನದಿಗಳು ಕುಡಿಯಲು ಯೋಗ್ಯವಾಗದಷ್ಟು ಕಲುಷಿತಗೊಂಡಿರುವ ಕುರಿತು ವರದಿಗಳು ಸ್ಪಷ್ಟಪಡಿಸುತ್ತಿದ್ದು, ಭವಿಷ್ಯತ್ತಿನ ಹಿತದೃಷ್ಟಿಯಿಂದ ತುಂಗಭದ್ರಾ ನದಿಯ ಮಾಲಿನ್ಯ ತಡೆಯಬೇಕಾದ ಅನಿವಾರ್ಯತೆಯಿದೆ. ಸರ್ಕಾರದ ಗಮನಸೆಳೆಯಲು ಮತ್ತು ಜನಜಲಜಾಗೃತಿಗಾಗಿ ಶನಿವಾರ ಮೂರನೇ ಹಂತದ ಜಲಜಾಗೃತಿ ಪಾದಯಾತ್ರೆ ನಡೆಯಲಿದೆ’ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
27ರಂದು ಬೆಳಗ್ಗೆ 10.30ಕ್ಕೆ ಹಿರೇಜಂತಕಲ್ ಪಂಪಾಪತಿ ದೇವಸ್ಥಾನದ ವೇದಿಕೆ ಕಾರ್ಯಕ್ರಮದ ನಂತರ ಮಂತ್ರಾಲಯದವರೆಗೆ ಪಾದಯಾತ್ರೆ ಆರಂಭಗೊಳ್ಳಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನಸಾಮಾನ್ಯರು, ವರ್ತಕರು, ಗಣ್ಯರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದರು.
ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಜಲಜಾಗೃತಿ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅಭಿಯಾನದ ಪ್ರಮುಖ ಬಸವರಾಜ ವೀರಾಪುರ ಮಾತನಾಡಿ ‘ಅತಿಯಾದ ರಾಸಾಯನಿಕ ಬಳಕೆ, ಕಾರ್ಖಾನೆಗಳ ತ್ಯಾಜ್ಯ ನೀರಿಗೆ ಬಿಡುತ್ತಿರುವುದರಿಂದ ದೇಶದ 80ಕ್ಕೂ ಹೆಚ್ಚು ನದಿಗಳು ಕಲುಷಿತಗೊಂಡಿದ್ದು, ತುಂಗಭದ್ರ ನದಿಯು ಇದಕ್ಕೆ ಹೊರತಾಗಿಲ್ಲ. ಶಿವಮೊಗ್ಗದಿಂದ ಕಿಷ್ಕಿಂಧೆ ತನಕ ಎರಡು ಹಂತದಲ್ಲಿ ಈಗಾಗಲೇ ಪಾದಯಾತ್ರೆ ನಡೆದಿದ್ದು, ಮೂರನೇ ಹಂತ ಗಂಗಾವತಿಯಿಂದ ಆರಂಭವಾಗಲಿದೆ’ ಎಂದರು.
ನೇತಾಜಿ ಸುಭಾಷಚಂದ್ರ ಬೋಸ್ ಅವರ ಮೊಮ್ಮಗಳು ಕೋಲ್ಕತ್ತದ ರಾಜಶ್ರೀ ಚೌದರಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಜಲಜಾಗೃತಿ ಕ್ರಾಂತಿಯ ರಾಜಸ್ಥಾನದ ರಾಜೇಂದ್ರಸಿಂಗ್, ಗದಗಿನ ಡಿ.ಆರ್.ಪಾಟೀಲ್ ಸೇರಿದಂತೆ ವಿವಿಧ ಮಠಾಧೀಶರು, ಗಣ್ಯರು, ಪಾಲ್ಗೊಳ್ಳಲಿದ್ದಾರೆ.
ಜನಜಾಗೃತಿ ರಾಯಬಾರಿ ಲಲಿತಾರಾಣಿ ರಂಗದೇವರಾಯಲು, ಕಾಡಾ ಮಾಜಿ ಅಧ್ಯಕ್ಷ ತಿಪ್ಪೆರುದ್ರಸ್ವಾಮಿ, ಜಗನ್ನಾಥ ಆಲಂಪಲ್ಲಿ, ವಿಷ್ಣುತೀರ್ಥ ಜೋಶಿ, ಪವನ್ ಕುಮಾರ್ ಗುಂಡೂರು, ಮಂಜುನಾಥ ಕಟ್ಟಿಮನಿ, ಅರ್ಜುನ್ ಹಾಗು ಶಿವುಕುಮಾರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.