
ಗಂಗಾವತಿ: ತುಂಗಭದ್ರಾ ಜಲಾಶಯದಿಂದ ನದಿಗೆ 1 ಲಕ್ಷ 40 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗಿದ್ದು, ಭಾನುವಾರ ಕಂಪ್ಲಿ-ಗಂಗಾವತಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿದೆ.
ಸೇತುವೆ ಮುಳುಗಡೆಯಾಗಿರುವ ಕಾರಣ ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ತೆಲಂಗಾಣ ರಾಜಧಾನಿ ಹೈದರಾಬಾದ್, ಮಂತ್ರಾಲಯ ಸೇರಿದಂತೆ ಪ್ರಮುಖ ನಗರಗಳಿಗೆ ಸಂಪರ್ಕ ಕಡಿತಗೊಂಡಿದೆ.
ತಾಲ್ಲೂಕಿನ ಹಂಪಿ ಪುರಂದರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ, ಚಕ್ರತೀರ್ಥ ಇನ್ನೂ ನೀರಿನಲ್ಲೇ ಇವೆ. ಹಂಪಿಯ ರಾಮ ಲಕ್ಷಣ ದೇವಸ್ಥಾನದ ಅಂಗಳಕ್ಕೆ ನೀರು ಹೊಕ್ಕಿದೆ. ಆನೆಗೊಂದಿ ನವವೃಂದಾವನ, ವಿರೂಪಾಪುರಗಡ್ಡೆಯಿಂದ ಹಂಪಿಗೆ ತೆರಳುವ ಮಾರ್ಗ ಸಂಪರ್ಕ ಕಳೆದುಕೊಂಡಿದೆ.
ಇನ್ನು ಕೃಷ್ಣದೇವರಾಯ ಸಮಾಧಿ (64 ಸಾಲಿನ ಕಂಬಗಳ ದೇವಸ್ಥಾನ) ನೀರಿನಲ್ಲಿ ಮುಳುಗಿದೆ.ಆನೆಗೊಂದಿ ಚಿಂತಾಮಣಿ ಬಳಿಯ ಮಂಟಪ, ಬಸವಣ್ಣನ ದೇವಸ್ಥಾನ ನೀರಿನಲ್ಲಿ ಸಂಪೂರ್ಣ ಮುಳುಗಿ ಹೋಗಿದೆ.
ಸಾಣಾಪುರ, ಸೇತುವೆ, ಹನುಮನ ಹಳ್ಳಿ, ದೇವಘಾಟ್, ಲಕ್ಷ್ಮಿಪುರ, ನಾಗನಳ್ಳಿ, ಚಿಕ್ಕಂಜಂಕಲ್ ಭಾಗದ ಭತ್ತ, ಕಬ್ಬು, ಬಾಳೆ ತೋಟಗಳಿಗೆ ಅಲ್ಲಲ್ಲಿ ನೀರು ನುಗ್ಗಿವೆ. ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿರುವ ಕಾರಣ ತುಂಗಭದ್ರಾ ಜಲಾಶಯ ಭದ್ರತಾ ಹಿತದೃಷ್ಟಿಯಿಂದ ಹೆಚ್ಚುವರಿ ನೀರು ನದಿಗೆ ಹರಿಸಲಾಗುತ್ತಿದೆ.
ಸದ್ಯ ತುಂಗಭದ್ರಾ ಜಲಾಶಯಕ್ಕೆ ತುಂಗಾ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟಿದ್ದು, ಒಳಹರಿವು ಬರುತ್ತಲೇ ಇದೆ.ಇನ್ನೂ ಹೆಚ್ಚುವರಿಯಾಗಿ ಭದ್ರಾ ಜಲಾಶಯದಿಂದ 40 ಸಾವಿರ ಕ್ಯೂಸೆಕ್, ವರದಾ ನದಿಯಿಂದ 20 ಸಾವಿರ ಕ್ಯೂಸೆಕ್ ಹರಿದು ಬರುತ್ತಿದೆ.
ಜಲಾಯನ ಪ್ರದೇಶದಲ್ಲಿ ತುಂಬ ಮಳೆಯಾಗುತ್ತಿದ್ದು, ಸದ್ಯ ತುಂಗಭದ್ರಾ ಜಲಾಶಯಕ್ಕೆ 1.40 ಲಕ್ಷ ಕ್ಯೂಸೆಕ್ ನೀರು ಒಳ ಹರಿವಾಗಿ ಬರುತ್ತಿದೆ. ಹಾಗಾಗಿ ಎಲ್ಲ 28 ಕ್ರಸ್ಟ್ಗೇಟ್ಗಳನ್ನು ತೆರೆದು 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ನದಿಗೆ ಹರಿಸ ಲಾಗುತ್ತಿದೆ.
ಕಂಪ್ಲಿ ಸೇತುವೆ ಮೇಲೆ ಸಂಚಾರ ನಿರ್ಬಂಧ
ಗಂಗಾವತಿ: ಕಂಪ್ಲಿ ಸೇತುವೆ ಮೇಲೆ ಭಾನುವಾರ ಮಧ್ಯಾಹ್ನದವರೆಗೆ ವಾಹನಗಳು ಸಂಚಾರ ಮಾಡಿವೆ. ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಟ್ಟಿದ್ದು ಇದರಿಂದ ಕಂಪ್ಲಿ ಸೇತುವೆ ಮುಳುಗಡೆ ಆಗುವ ಸಂಭವವಿರುವ ಕಾರಣ ಗಂಗಾವತಿ ಲೋಕೋಪಯೋಗಿ ಇಲಾಖೆ ಉಪವಿಭಾಗ ಕಮಲಾಪುರ ಗಂಗಾವತಿ ಪೊಲೀಸ್ ಠಾಣೆಗೆ ಸೇತುವೆ ಮೇಲೆ ಸಂಚಾರ ಸ್ಥಗಿತಗೊಳಿಸಿ ಪ್ರವೇಶ ದ್ವಾರದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲು ಪತ್ರ ಬರೆದಿದೆ.
ಇನ್ನೂ ತಾಲ್ಲೂಕು ಆಡಳಿತ ಗ್ರಾ.ಪಂಗಳು ಯಾರೂ ಕೂಡ ಅನಗತ್ಯವಾಗಿ ನದಿ ಪಾತ್ರದಲ್ಲಿ ಓಡಾಡಬಾರದು. ಸೆಲ್ಪಿ ತೆಗೆದುಕೊಳ್ಳಲು ತೆರಳಬಾರದು. ಜಾನುವಾರು ಮೇಯಿಸಬಾರದು. ತೆಪ್ಪ ಮೋಟಾರ್ ದೋಣಿ ತೆಗೆದುಕೊಂಡು ನದಿಗೆ ಇಳಿಯಬಾರದು ಎಂದು ಡಂಗೂರದ ಮೂಲಕ ಎಚ್ಚರಿಕೆ ನೀಡಲಾಗಿದೆ. ನದಿ ಸಮೀಪ ಅಗತ್ಯ ಭದ್ರತೆಗಾಗಿ ಪೋಲಿಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.