
ಗಂಗಾವತಿ: ಹೆದ್ದಾರಿಗಳ ಸುಧಾರಣೆಯ ಮೂಲಕ ದೇಶದ ಆರ್ಥಿಕ ಶಕ್ತಿ ಹೆಚ್ಚಳಕ್ಕೆ ಬಲ ತುಂಬಿದವರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಅಗ್ರಗಣ್ಯರು. ಅವರು ಮಾಡಿದ ಕೆಲಸಗಳು ಸದಾ ಸ್ಮರಣೀಯ ಎಂದು ಶಾಸಕ ಜನರ್ದಾನ ರೆಡ್ಡಿ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ವಿಶ್ವದಲ್ಲಿರುವ ದೇಶಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಸಮಯದಲ್ಲಿ ದೇಶದ ಆರ್ಥಿಕತೆ ಕುಂಟುತ್ತ ಸಾಗುತ್ತಿತ್ತು. ಅಂಥ ಸಂಕಷ್ಟದ ಸಂದರ್ಭದಲ್ಲಿ ಪ್ರಧಾನಿಯಾದ ವಾಜಪೇಯಿ ಅವರು ನೂತನ ಯೋಜನೆಗಳ ಮೂಲಕ ಭಾರತದ ಆರ್ಥಿಕತೆಯನ್ನು ಎತ್ತಿ ಹಿಡಿದಿದ್ದಾರೆ. ದೇಶದ ಉದ್ದಗಲಕ್ಕೂ ಸುಸಜ್ಜಿತ ಹೆದ್ದಾರಿಗಳ ನಿರ್ಮಾಣ ಮಾಡಿದ್ದಾರೆ’ ಎಂದು ಸ್ಮರಿಸಿದರು.
‘ದೇಶದ ನದಿಗಳ ಜೋಡಣೆಯ ಕನಸು ಕಟ್ಟಿಕೊಂಡಿದ್ದ ವಾಜಪೇಯಿಯವರು ದೂರದೃಷ್ಠಿಯುಳ್ಳ ನಾಯಕರಾಗಿದ್ದರು. ಅವರ ರಾಜಕೀಯ ಜೀವನವು ಆದರ್ಶಮಯವಾಗಿದ್ದು, ರಾಜಕೀಯವಾಗಿ, ಕೌಟುಂಬಿಕವಾಗಿ, ಸಾಮಾಜಿಕವಾಗಿ ಯಾವುದೇ ರೀತಿಯ ಶತ್ರುಗಳನ್ನು ಹೊಂದದೆ ಇರುವ ಕಾರಣಕ್ಕೆ ಅವರಿಗೆ ಅಜಾತಶತ್ರು ಎನ್ನುವ ಗೌರವ ಲಭಿಸಿದೆ’ ಎಂದರು. ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಮಾಜಿ ಶಾಸಕ ಪರಣ್ಣ ಮುನವಳ್ಳಿ, ಪಕ್ಷದ ಪ್ರಮುಖರಾದ ಸಿಂಗನಾಳ ವಿರೂಪಾಕ್ಷಪ್ಪ, ಚಂದ್ರು ಹಿರೂರು, ಡಿ.ಕೆ.ಆಗೋಲಿ, ಕಾಶಿನಾಥ ಚಿತ್ರಗಾರ, ಶಿವು ಅರಿಕೇರಿ, ವೀರಭದ್ರಪ್ಪ ನಾಯಕ, ವಾಸುದೇವ ನವಲಿ, ನವೀನ ಮಾಲಿಪಾಟೀಲ, ಸಿದ್ದರಾಮಯ್ಯಸ್ವಾಮಿ ಎಚ್.ಎಂ, ಸಂಗಮೇಶ, ರಾಚಪ್ಪ ಸಿದ್ದಾಪುರ, ಚಂದ್ರಶೇಖರ ಅಕ್ಕಿ, ಮಂಜುನಾಥ ಕಟ್ಟಿಮನಿ, ಉಮೇಶ, ಸಂಗಯ್ಯ ಸ್ವಾಮಿ, ಶ್ರೀನಿವಾಸ ದೂಳಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.