ಕೊಪ್ಪಳ: ಶ್ರಾವಣ ಮಾಸದಲ್ಲಿ ಬರುವ ವರಮಹಾಲಕ್ಷ್ಮೀ ಹಬ್ಬ ಶುಕ್ರವಾರ ನಡೆಯಲಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆಯೂ ಜನ ಉತ್ಸಾಹದಿಂದ ಸಾಮಗ್ರಿಗಳನ್ನು ಖರೀದಿ ಮಾಡಿದರು.
ಇಲ್ಲಿನ ಕೇಂದ್ರಿಯ ಬಸ್ ನಿಲ್ದಾಣದ ಮುಂಭಾಗ, ಅಶೋಕ ವೃತ್ತ ಹಾಗೂ ಜವಾಹರ ರಸ್ತೆಯಲ್ಲಿ ಮಲ್ಲಿಕೆ, ಕನಕಾಂಬರ, ಗುಲಾಬಿ, ಶಾವಂತಿಗೆ ಹೀಗೆ ತರಹೇವಾರಿ ಹೂಗಳನ್ನು ಖರೀದಿಗೆ ಇರಿಸಲಾಗಿತ್ತು. ಜನ ಬಾಳೆದಿಂಡು, ವಿವಿಧ ಹಣ್ಣುಗಳನ್ನು ಖರೀದಿಸಿದರು. ಹಬ್ಬದ ದಿನ ಮನೆಗಳಲ್ಲಿ ಲಕ್ಷ್ಮೀ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಪೂಜಾ ಕೈಂಕರ್ಯಕ್ಕೆ ಹಣ್ಣು, ಹೂವು ಖರೀದಿಸಿದರು. ಹೂವು ಮತ್ತು ಹಣ್ಣಿನ ದರಗಳಲ್ಲಿ ಏರಿಕೆಯಾಗಿದೆ.
ಹಬ್ಬಕ್ಕೆ ಎರಡು ದಿನಗಳ ಮೊದಲೇ ಮಲ್ಲಿಗೆ ಒಂದು ಮಾರು ಹೂವಿಗೆ ₹30 ಇತ್ತು. ಆ ಬೆಲೆ ಗುರುವಾರ ₹50ಕ್ಕೆ ಏರಿಕೆಯಾಗಿತ್ತು. ಬಿಡಿಬಿಡಿಯಾಗಿ ಮಾರಾಟ ಮಾಡುತ್ತಿದ್ದ ಒಂದು ಪಾಕೆಟ್ನ ಗುಲಾಬಿ ಹೂವಿಗೆ ₹20 ಇತ್ತು. ಕನಕಾಂಬರ ₹60 ಪ್ರತಿ ಮೊಳಕ್ಕೆ ಮಾರಾಟವಾಯಿತು.
ಬೆಲೆ ಏರಿಕೆ ಇದ್ದರೂ ಹಬ್ಬದ ಆಚರಣೆಗೆ ಹೂಗಳು ಹಾಗೂ ಹಣ್ಣುಗಳ ಖರೀದಿ ಅನಿವಾರ್ಯವಾಗಿದ್ದರಿಂದ ಜನ ಕೂಡ ಖರೀದಿ ಮಾಡುತ್ತಿದ್ದರು. ಬಸ್ ನಿಲ್ದಾಣದ ಮುಂಭಾಗದಲ್ಲಿ ಹೆಚ್ಚಿನ ಜನಸಂದಣಿ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.