ADVERTISEMENT

ಶುದ್ಧ ಮನಸ್ಸಿನಿಂದ ದೇವರ ಆರಾಧಿಸಿ: ಪೇಜಾವರ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 2:52 IST
Last Updated 15 ನವೆಂಬರ್ 2021, 2:52 IST
ಗಂಗಾವತಿಯ ರಾಘವೇಂದ್ರಸ್ವಾಮಿ ಮಠದಲ್ಲಿ ನಡೆದ ವಿಜಯದಾಸರ 266ನೇ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ವಿಜಯದಾಸ ಭಕ್ತ ಮಂಡಳಿ ವತಿಯಿಂದ ಪೇಜಾವರ ಮಠಾಧೀಶ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು
ಗಂಗಾವತಿಯ ರಾಘವೇಂದ್ರಸ್ವಾಮಿ ಮಠದಲ್ಲಿ ನಡೆದ ವಿಜಯದಾಸರ 266ನೇ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ವಿಜಯದಾಸ ಭಕ್ತ ಮಂಡಳಿ ವತಿಯಿಂದ ಪೇಜಾವರ ಮಠಾಧೀಶ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು   

ಗಂಗಾವತಿ: ‘ಯತಿವರೇಣ್ಯರು ಭಗವಂತನ ಸ್ವರೂಪಿಗಳು. ಅವರು ಮಾಡುವ ಪೂಜೆ, ಪ್ರಾರ್ಥನೆ, ಆರಾಧನೆಗಳು ನೇರವಾಗಿ ಭಗವಂತನಿಗೆ ಸಲ್ಲುತ್ತವೆ. ಅಂಥ ಯತಿವರೇಣ್ಯರು ಭಕ್ತ ಪೂರ್ವಕವಾಗಿ ಆಚರಣೆ ಮಾಡುತ್ತಿರುವ ವಿಜಯದಾಸರ ಆರಾಧನಾ ಮಹೋತ್ಸವ ಅತ್ಯಂತ ಪವಿತ್ರವಾಗಿದೆ’ ಎಂದು ಪೇಜಾವರ ಮಠಾಧೀಶ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ನಗರದ ರಾಘವೇಂದ್ರಸ್ವಾಮಿ ಮಠದಲ್ಲಿ ನಡೆದ ವಿಜಯದಾಸರ 266ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಗವಂತನ ಆರಾಧನೆಯಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಭಗವಂತನಿಗೆ ಆಲಂಕಾರಿಕ ಪೂಜೆ ಮಾಡದೆ, ಪರಿಶುದ್ಧ ಹಾಗೂ ಸ್ವಚ್ಚ ಮನಸ್ಸಿನಿಂದ ಪೂಜೆ ಸಲ್ಲಿಸಬೇಕು. ಪ್ರತಿಯೊಬ್ಬರನ್ನು ಪ್ರೀತಿಯಿಂದ ಹತ್ತಿರಕ್ಕೆ ಕರೆದುಕೊಳ್ಳುವ ಸ್ವಭಾವ ಹೊಂದಿರಬೇಕು ಎಂದರು.

ADVERTISEMENT

ದಾಸರು ರಚಿಸಿದ ಸುಳಾದಿ, ಪದ, ಪದ್ಯಗಳನ್ನು ಎಲ್ಲರೂ ತಪ್ಪದೇ ನಿತ್ಯ ಪಠಿಸಬೇಕು. ವಿಜಯ ದಾಸ ಭಕ್ತ ಮಂಡಳಿ ಮತ್ತು ಬ್ರಾಹ್ಮಣ ಸಮಾಜದ ವತಿಯಿಂದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರಿಗೆ ಸನ್ಮಾನ‌ ಮಾಡಲಾಯಿತು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಪ್ರಾಣೇಶ ಮತ್ತು ವೆಂಕಣ್ಣ ಚಿತ್ರಗಾರ ಅವರಿಗೂ ಸಹ ಸನ್ಮಾನ ಕಾರ್ಯಕ್ರಮ‌ ಜರುಗಿತು.

ವಿಜಯದಾಸರ ಆರಾಧನಾ ಮಹೋತ್ಸವದ ಅಂಗವಾಗಿ ನಗರದ ಸುಂಕದಕಟ್ಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಶ್ರೀರಾಘವೇಂ ದ್ರಸ್ವಾಮಿಗಳ ಮಠದವರೆಗೂ ಶೋಭಾಯಾತ್ರೆ ಜರುಗಿತು.

ಮಾಜಿ ಸಂಸದ ಎಚ್.ಜಿ.ರಾಮುಲು, ನವಲಿ ಗುರುರಾಜರಾವ, ಪವನಕುಮಾರ ಗುಂಡೂರು, ರಾಘವೇಂದ್ರ ಮೇಘೂರು, ನಗರಸಭಾ ಮಾಜಿ ಸದಸ್ಯ ಶ್ಯಾಮಚಾರ ಜೋಶಿ, ಅಪ್ಪಣ್ಣ ದೇಶಪಾಂಡೆ, ಸತ್ಯನಾರಾಯಣರಾವ ದೇಶಪಾಂಡೆ, ಶಾಸಕ ಪರಣ್ಣ ಮುನವಳ್ಳಿ, ಎಚ್. ಕೆ. ಶ್ರೀಧರರಾವ್, ಕಾಡಾ ಅದ್ಯಕ್ಷ ತಿಪ್ಪೇರುದ್ರಸ್ವಾಮಿ, ಎಚ್.ಕೆ.ಗೋಪಾಲಕೃಷ್ಣ, ನ್ಯಾಯವಾದಿ ಪ್ರಹ್ಲಾದರಾವ್ ನವಲಿ, ಮಂತ್ರಾಲಯದ ಮಾನಕರಿ ಸುಮುಖಚಾರ, ವಾಗೀಷಚಾರ ಗೊರೆಬಾಳ, ಹನುಮೇಶಚಾರ ದಿಗ್ಗಾವಿ, ನಾಗರಾಜಚಾರ ಸರಜೋಷಿ, ಕಲ್ಮಂಗಿ ಆಚಾರ, ಸ್ವಾಮೀರಾವ ಹೇರೂರು, ವಾಮನರಾವ್ ಮುಕ್ತೆದಾರ, ಶ್ಯಾಮರಾವ ಮುಕ್ತೆದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.