
ಯಲಬುರ್ಗಾ: ಕುರಿ ಕಳ್ಳತನ ಮಾಡುವ ಜಾಲವನ್ನು ಪತ್ತೆ ಮಾಡಿ ಕುರಿಗಳ ಮಾಲೀಕರಿಗೆ ನ್ಯಾಯ ಒದಗಿಸಬೇಕು, ಕುರಿಗಾರರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳು ಪಟ್ಟಣದಲ್ಲಿ ಪತ್ರಿಭಟನೆ ನಡೆಸಿದವು.
‘ನಿರಂತರವಾಗಿ ನಡೆಯುತ್ತಿರುವ ಕುರಿಗಳ್ಳತನ ಪ್ರಕರಣಗಳು ಮತ್ತೆ ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
‘ತಾಲ್ಲೂಕಿನ ತುಮ್ಮರಗುದ್ದಿ ಗ್ರಾಮದ ಹೊರವಲಯದಲ್ಲಿ ಕುರಿ ಕಳ್ಳರು ಕುರಿಗಳ ಹಟ್ಟಿಯ ಹತ್ತಿರದಲ್ಲಿಯೇ ವಾಸ್ತವ್ಯ ಹೂಡಿ ರಾತ್ರಿ ಹೊತ್ತಿನಲ್ಲಿ ಕುರಿಗಳ ಬಾಯಿ ಮತ್ತು ಕಾಲುಗಳನ್ನು ಕಟ್ಟಿ ಹೊತ್ತು ತಮ್ಮ ವಾಹನದಲ್ಲಿ ಹಾಕುವ ಸಂದರ್ಭದಲ್ಲಿ ತಪ್ಪಿಸಿಕೊಂಡು ಹೋಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕುರಿಕಳ್ಳತನ ಪ್ರಕರಣಗಳ ಬಗ್ಗೆ ಠಾಣೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕುರಿಗಳನ್ನು ಕಟ್ಟಿಕೊಂಡು ಊರೂರು ಅಲೆದು ಜೀವನ ಸಾಗಿಸುವ ಕುರಿಗಾರರಿಗೆ ರಕ್ಷಣೆ ಇಲ್ಲದಾಗಿದೆ. ಕಳ್ಳರನ್ನು ಹಿಡಿಯುವ ಪ್ರಯತ್ನದಲ್ಲಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಪೊಲೀಸರು ಕುರಿಗಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಬೀರಲಿಂಗೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಸವರಾಜ ಭಜಂತ್ರಿ, ಉಪಾಧ್ಯಕ್ಷ ಶಿವಪ್ಪ ದಂಡಿನ, ಕಾರ್ಯದರ್ಶಿ ದ್ಯಾಮಣ್ಣ ಪರಂಗಿ, ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ರಾಜಶೇಖರ ಶ್ಯಾಗೋಟಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ (ವಾಸುದೇವ ಮೇಟಿ ಬಣ) ಸಂಘದ ಅಧ್ಯಕ್ಷ ಶರಣಬಸಪ್ಪ ದಾನಕೈ, ಮುಖಂಡರಾದ ಶೇಖರ ಗುರಾಣಿ, ಬಸವರಾಜ ಗುಳಗುಳಿ, ದೊಡ್ಡಯ್ಯ ಗುರುವಿನ, ಶಿವು ರಾಜೂರ, ದೇವಪ್ಪ ಬನಪ್ಪನವರ, ದೇವಪ್ಪ ಪರಂಗಿ, ರೇವಣಪ್ಪ ಹಿರೇಕುರಬರ, ನೀಲನಗೌಡ ತಳವಗೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.