ಮಂಡ್ಯ: ವಕೀಲರ ಭವನ ನಿರ್ಮಿಸಲು ₹ 2 ಕೋಟಿ ವೆಚ್ಚ ಅಂದಾಜಿಸಲಾಗಿದ್ದು, ಲೋಪ ಆಗದಂತೆ ನಿರ್ಮಾಣ ಹೊಣೆ ನಿಭಾಯಿಸಲಾಗುವುದು’ ಎಂದು ಸಂಸದ ಸಿ.ಎಸ್.ಪುಟ್ಟರಾಜು ಗುರುವಾರ ಇಲ್ಲಿ ಭರವಸೆ ನೀಡಿದರು.
ವಕೀಲರ ಸಂಘದ ಕಚೇರಿ ಆವರಣದಲ್ಲಿ ವಕೀಲರ ಸಂಘದ ವತಿಯಿಂದ ಗುರುವಾರ ನಡೆದ ವಕೀಲರ ಭವನ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯಸಭೆ ಸದಸ್ಯ ಕುಪೇಂದ್ರರೆಡ್ಡಿ ಹಾಗೂ ನನ್ನ ಸಂಸದರ ಅನುದಾನದಿಂದ ₹ 50 ಲಕ್ಷ ನೀಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು ₹ 15 ಲಕ್ಷ ಅನುದಾನ ಕೊಡುವುದಾಗಿ ಹೇಳಿದ್ದಾರೆ ಎಂದು ಈ ಸಂದರ್ಭ ತಿಳಿಸಿದರು.
‘ನನಗೆ ತಿಳಿದಮಟ್ಟಿಗೆ ಈಗಾಗಲೇ ₹ 1.31 ಕೋಟಿ ಅನುದಾನ ಆರ್ಥಿಕ ನೆರವು ಲಭ್ಯವಾಗುವ ಸಾಧ್ಯತೆಯಿದೆ. ₹ 2 ಕೋಟಿ ವೆಚ್ಚದಲ್ಲಿ ಭವನ ನಿರ್ಮಿ ಸೋಣ, ಜನಪ್ರತಿನಿಧಿಗಳು, ಉದ್ಯಮಿಗಳಿಂದ ನೆರವು ಪಡೆಯೋಣ ಎಂದರು.
ವಕೀಲರ ಸಂಘದಲ್ಲಿ 1000 ಮಂದಿಗೂ ಹೆಚ್ಚು ಸದಸ್ಯರಿದ್ದೀರಿ. ತಲಾ ₹ 1000 ನೀಡಿದರೆ ಅನುಕೂಲ. ಭವನ ನಿರ್ಮಾಣಕ್ಕೆ ಸಹಕಾರ ಮಾಡಿ ದಂತಾಗುತ್ತದೆ. ಇದು ಬೇರೆ ಜಿಲ್ಲೆಗೂ ಮಾದರಿ ಆಗಲಿದೆ ಎಂದು ಹೇಳಿದರು.
ಜೆಡಿಎಸ್ ಮುಖಂಡ ವೈದ್ಯ ಡಾ.ಕೃಷ್ಣ ಮಾತನಾಡಿ, ವಕೀಲರ ಭವನ ನಿರ್ಮಾಣಕ್ಕೆ ₹ 1 ಲಕ್ಷ ನೀಡಲಾಗಿದೆ. ಮತ್ತೆ ಕೈಲಾದ ನೆರವು ನೀಡುವುದಾಗಿ ಭರವಸೆ ನೀಡಿದರು.
ಒಕ್ಕಲಿಗರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ಮಾತನಾಡಿದರು. ಮಾಜಿ ಸಂಸದ ಜಿ. ಮಾದೇಗೌಡ, ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಎಚ್.ಜಿ.ವಿಜಯ ಕುಮಾರಿ, ಮಾಜಿ ಶಾಸಕ ಎಂ. ಶ್ರೀನಿವಾಸ್, ವಕೀಲರ ಸಂಘದ ಅಧ್ಯಕ್ಷ ಜಿ.ಮರೀಗೌಡ, ಪ್ರಧಾನ ಕಾರ್ಯದರ್ಶಿ ಪಿ.ಕೆ.ಶಶಿಧರ, ಎಚ್.ಹೊಂಬೇಗೌಡ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಎಸ್.ಕೆ.ಪ್ರಕಾಶ್, ವಕೀಲರಾದ ಎಂ.ಬಿ. ಬಸವರಾಜು, ಜಿ.ಎನ್.ಮಂಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.