ADVERTISEMENT

ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 6:05 IST
Last Updated 12 ಅಕ್ಟೋಬರ್ 2012, 6:05 IST

ಮದ್ದೂರು: ಇಲ್ಲಿನ ಎಚ್.ಕೆ.ವೀರಣ್ಣಗೌಡ ಕಾಲೇಜಿನ ವಿದ್ಯಾರ್ಥಿಗಳು ಶುಲ್ಕ ರಿಯಾಯತಿಯಲ್ಲಿನ ಗೊಂದಲ ಖಂಡಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕಾಲೇಜಿನ ಆವರಣದಿಂದ ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆ ಹೊರಟ ವಿದ್ಯಾರ್ಥಿಗಳು ದಾರಿಯುದ್ದಕೂ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ತಾಲ್ಲೂಕು ಕಚೇರಿಗೆ ತೆರಳಿ ಅಲ್ಲಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಈ ಹಿಂದೆ ಪದವಿ ತರಗತಿಗೆ ದಾಖಲಾಗುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಕೇವಲ 160 ರೂಪಾಯಿ ಪಾವತಿಸಿ ದಾಖಲಾತಿ ಪಡೆ ಯುತ್ತಿದ್ದರು. ಇದೀಗ 2420 ರೂಪಾಯಿ ಶುಲ್ಕ ಪಾವತಿಸಬೇಕಾದ ಪರಿಸ್ಥಿತಿ ಒದಗಿದೆ. ಈ ಹಣವನ್ನು ವಿದ್ಯಾರ್ಥಿಗಳ ಖಾತೆಗೆ ಜಮಾ ಮಾಡುವುದಾಗಿ ಹಿಂದುಳಿದ ವರ್ಗಗಳ ಇಲಾಖೆ ತಿಳಿಸಿದೆ. ಆದರೆ ಈ ಬಗೆಗೆ ಯಾವುದೇ ನಂಬಿಕೆ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.

ವಿದ್ಯಾರ್ಥಿ ಮುಖಂಡರಾದ ಪವಿತ್ರ, ಪ್ರವೀಣ್, ಲೋಕೇಶ್, ಜಗದೀಶ್, ಗುರುಪ್ರಸಾದ್, ಕಾವ್ಯ, ಸುನೀಲ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಶುಲ್ಕ ಹೆಚ್ಚಳಕ್ಕೆ ವಿರೋಧ
ಮಳವಳ್ಳಿ: ಪರೀಕ್ಷೆ ಶುಲ್ಕವನ್ನು ಹೆಚ್ಚು ಮಾಡಿರುವುದನ್ನು ಕೂಡಲೇ ಕಡಿಮೆಗೊಳಿಸಬೇಕೆಂದು ಒತ್ತಾಯಿಸಿ ಗುರುವಾರ ಪಟ್ಟಣದ ಶಾಂತಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪದವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ನಂತರ ತಾಲ್ಲೂಕು ಕಚೇರಿಗೆ ತೆರಳಿ ಮನವಿಪತ್ರ ಸಲ್ಲಿಸಿದರು.

ಕಾಲೇಜು ಬಳಿಯಿಂದ ಹೊರಟ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದ ಬಳಿ ಹಾಗೂ ಅನಂತರಾಂ ವೃತ್ತದ ಬಳಿ ಕೆಲ ಸಮಯ ಕುಳಿತು ಏಕಾಏಕಿ ಪರೀಕ್ಷೆ ಶುಲ್ಕ ಹೆಚ್ಚು ಮಾಡಿರುವುದು ಸರಿಯಲ್ಲ. ಇದರಿಂದ ಗ್ರಾಮೀಣ ಪ್ರದೇಶದ ನಮಗೆ ತೀವ್ರ ತೊಂದರೆಯಾಗುತ್ತಿದೆ ಕೂಡಲೇ ಇಳಿಸಬೇಕೆಂದು ಆಗ್ರಹಿಸಿದರು. ನಂತರ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಿದರು.

ವಿದ್ಯಾರ್ಥಿಗಳಾದ ಅಶೋಕ್, ಡಿ.ಜೆ.ಲೋಕೇಶ್, ಅರುಣಕುಮಾರ್, ಮಹದೇವಸ್ವಾಮಿ, ಮೇಘನಾ, ಮಮತ, ಅಭಿಲಾಷ, ಅಶ್ವಿನಿ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಇದ್ದರು.

ತರಗತಿ ಬಹಿಷ್ಕಾರ
ಕೃಷ್ಣರಾಜಪೇಟೆ: ಮೈಸೂರು ವಿಶ್ವ ವಿದ್ಯಾನಿಲಯ ಪರೀಕ್ಷಾ ಶುಲ್ಕಗಳನ್ನು ಅವೈಜ್ಞಾನಿಕವಾಗಿ ಏಕಾಏಕಿ ಏರಿಸಿದ್ದು, ಇದು ವಿದ್ಯಾರ್ಥಿ ವಿರೋಧಿ ಧೋರಣೆಯಾಗಿದೆ ಎಂದು ಖಂಡಿಸಿ ಗುರುವಾರ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಪ್ರಸಕ್ತ ಸಾಲಿನಲ್ಲಿ ವಿಶ್ವವಿದ್ಯಾನಿಲ ಯದ ಪರೀಕ್ಷಾ ಶುಲ್ಕವನ್ನು ದುಪ್ಪಟ್ಟು ಪ್ರಮಾಣದಲ್ಲಿ ಏರಿಸಲಾಗಿದ್ದು, ಇದು ಗ್ರಾಮೀಣ ವಿದ್ಯಾರ್ಥಿಗಳಿಗೆ ತೀರಾ ಹೊರೆಯಾಗಿದೆ. ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದರೂ ಶುಲ್ಕ ಪಾವತಿಯಲ್ಲಿ ವಿನಾಯತಿ ಸಿಗದಿರುವುದರಿಂದ ಸಹ ತೊಂದರೆಯಾಗುತ್ತಿದೆ ಎಂಬುದು ವಿದ್ಯಾರ್ಥಿಗಳು ಅಳಲು ತೋಡಿ ಕೊಂಡರು.

ತರಗತಿಗಳಿಗೆ ಹಾಜರಾಗದೆ ಕಾಲೇಜಿನ ಒಳಾಂಗಣದಲ್ಲಿ ಹುಲ್ಲು ಹಾಸಿನ ಮೇಲೆಯೇ ಕುಳಿತ ಪ್ರತಿಭಟನಾಕಾರರು ಕೂಡಲೇ ವಿ.ವಿ. ಯು ತನ್ನ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿ ಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.