ADVERTISEMENT

ಪ್ರಗತಿ ಕಾಣದ ಕೃಷಿ ಮಾರುಕಟ್ಟೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 7:10 IST
Last Updated 18 ಫೆಬ್ರುವರಿ 2011, 7:10 IST

ಮದ್ದೂರು: ಭಾರತದ ಕೃಷಿ ಉತ್ಪನ್ನಗಳಿಗೆ ಪೂರಕವಾಗಿ ಕೃಷಿ ಮಾರುಕಟ್ಟೆಗಳು ಅಭಿವೃದ್ಧಿ ಹೊಂದದಿರುವುದು ವಿಷಾದದ ಸಂಗತಿ ಎಂದು ದಾವಣಗೆರೆ ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಪ್ರೊ.ಇಂದುಮತಿ ಗುರುವಾರ ತಿಳಿಸಿದರು. ಪಟ್ಟಣದ ಎಚ್.ಕೆ.ವೀರಣ್ಣಗೌಡ ಕಾಲೇಜಿನಲ್ಲಿ ಏರ್ಪಡಿಸಿದ್ದ ಭಾರತದ ಕೃಷಿ ಮಾರುಕಟ್ಟೆ ಮತ್ತು ಆರ್ಥಿಕ ವ್ಯವಸ್ಥೆ ಕುರಿತ ಯುಜಿಸಿ ಪ್ರಾಯೋಜಿತ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವದ ಕೃಷಿ ಮಾರುಕಟ್ಟೆ ವ್ಯವಸ್ಥೆ ಶ್ರೀಮಂತ ರಾಷ್ಟ್ರಗಳ ಕಪಿಮುಷ್ಠಿಯಲ್ಲಿ ಸಿಲುಕಿದೆ.
 
ಇದನ್ನು ಸರಿಪಡಿಸುವಲ್ಲಿ ರಾಷ್ಟ್ರದ ಕೃಷಿ ಮಾರುಕಟ್ಟೆಗಳನ್ನು ದಲ್ಲಾಳಿ ಮುಕ್ತವಾಗಿಸಬೇಕಿದೆ. ಅಲ್ಲದೇ ಆಹಾರ ಉತ್ಪಾದನೆಯಲ್ಲಿ ಹೆಚ್ಚಳ ಹಾಗೂ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಸಲಹೆ ನೀಡಿದರು. ಮೈಸೂರು ವಿವಿ ವಿಶ್ರಾಂತ ಕುಲಪತಿ ಡಾ.ಎಂ.ಮಾದಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತದಲ್ಲಿ ಕೃಷಿ ಇನ್ನು ಉದ್ಯಮವಾಗಿ ಬದಲಾಗದಿರುವುದೇ ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿದೆ. ರೈತರು ಬೆಳೆದ ಪದಾರ್ಥಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ಬೆಂಬಲ ಬೆಲೆ ನಿಗದಿ ಮಾಡುವಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ನಂತರ ನಡೆದ ಮೊದಲ ಗೋಷ್ಠಿಯಲ್ಲಿ ಪ್ರಾಧ್ಯಾಪಕ ಡಾ.ಬಿ.ಎಚ್.ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರಾಜೇಂದ್ರನ್, ಮಂಡ್ಯ ಸ್ನಾತಕೋತ್ತರ ಕೇಂದ್ರ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ಎಂ.ಜಿ.ಬಸವರಾಜು, ಪ್ರಾಧ್ಯಾಪಕ ಎಚ್.ಆರ್. ಕೃಷ್ಣಯ್ಯಗೌಡ ಡಾ.ಕೆ.ಶಿವಚಿತ್ತಪ್ಪ ವಿಚಾರ ಮಂಡಿಸಿದರು. ಮಧ್ಯಾಹ್ನ ನಡೆದ 2ನೇ ಗೋಷ್ಠಿಯಲ್ಲಿ ಅನಂತಪುರಂನ ಶ್ರೀಕೃಷ್ಣದೇವರಾಯ ವಿವಿಯ ಪ್ರಾಧ್ಯಾಪಕ ಡಾ. ರಾಮಾಂಜನೇಯಲು ಅಧ್ಯಕ್ಷತೆ ವಹಿಸಿದ್ದರು. ಡಾ.ಓ.ಡಿ.ಹೆಗಡೆ, ಡಾ.ಬಿ.ಗೋಪಾಲ್‌ಸಿಂಗ್, ಡಾ.ಎಚ್. ಪ್ರಕಾಶ್, ಡಾ.ಬಿ.ಪರಮಶಿವಯ್ಯ ಪ್ರಬಂಧ ಮಂಡಿಸಿದರು.

ಮೈಸೂರು ಮಾನಸ ಗಂಗೋತ್ರಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ.ಜಿ.ಕೋಟೇಶ್ವರ, ಸಂಸ್ಥೆಯ ಕಾರ್ಯದರ್ಶಿ ಕೆ.ಟಿ.ಚಂದು, ನಿರ್ದೇಶಕ ಅಪೂರ್ವಚಂದ್ರ, ಪ್ರಾಂಶುಪಾಲರಾದ ಪ್ರೊ.ಸಿದ್ದರಜು, ಕಾರ್ಯಕ್ರಮ ಸಂಯೋಜಕರಾದ ಪ್ರೊ.ಎಚ್.ಬಿ.ಶಿವಲಿಂಗಪ್ಪ, ಪ್ರೊ.ಕೆ. ಎಂ.ಸುರೇಶ್, ಪ್ರೊ.ಕಾಂತರಾಜು, ಸಂಘಟನಾ ಕಾರ್ಯದರ್ಶಿ ಪ್ರೊ.ಎಲ್. ರಾಮಲಿಂಗಯ್ಯ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಧ್ಯಾಪಕರು, ಉಪನ್ಯಾಸಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.