ಮಂಡ್ಯ: ‘ಕೇಂದ್ರ ಬಜೆಟ್ ನೋಡಿದ ನಂತರ ಅಭಿವೃದ್ಧಿಗೆ ಪೂರಕವಾದ ರಾಜ್ಯ ಬಜೆಟ್ ನಿರೀಕ್ಷಿಸಲು ಸಾಧ್ಯವಿಲ್ಲ. ಹಲವು ಸಮಸ್ಯೆ ಎದುರಿಸುತ್ತಿರುವ ಮುಖ್ಯಮಂತ್ರಿಗಳು ಜನಪರ ಬಜೆಟ್ ಮಂಡಿಸುತ್ತಾರೆ ಎಂಬ ನಂಬಿಕೆ ನನಗಿಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಹಲವು ಯೋಜನೆಗಳಿಗೆ ಅನುದಾನ ನೀಡುವಂತೆ ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರ ಕೇಳಿದೆ. ಆದರೆ ಕೇಂದ್ರ ಸರ್ಕಾರ ಅನುದಾನ ಕಡಿತ ಮಾಡಿದೆ. ಬರಬೇಕಾದ ಹಣವೂ ಬಾರದ ಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಒಳ್ಳೆಯ ಬಜೆಟ್ ಮಂಡನೆ ಮಾಡಲು ಸಾಧ್ಯವೇ’ ಎಂದು ಪ್ರಶ್ನಿಸಿದರು.
‘ಬಿಜೆಪಿ ಸರ್ಕಾರ ಆರ್ಎಸ್ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆಯಲು ಹೆಚ್ಚು ಆಸಕ್ತಿ ತೋರಿಸುತ್ತಿದೆ. ಹಿಂದೂಪರ ಸಂಘಟನೆಗಳು, ಅವುಗಳ ಅಂಗಸಂಸ್ಥೆಗಳ ಕಾನೂನು ಬಾಹಿರ ಚಟುವಟಿಕೆಗಳನ್ನು ಮುಚ್ಚಿಹಾಕಲಾಗುತ್ತಿದೆ. ನಮ್ಮ ಕುಟುಂಬ ಬಿಜೆಪಿ ಮುಖಂಡರಿಗಿಂತ ಹೆಚ್ಚಿನ ಮಟ್ಟದಲ್ಲಿ ಹಿಂದೂ ಸಂಸ್ಕೃತಿ ಪಾಲನೆ ಮಾಡುತ್ತಿದೆ. ನಾನು ಹಿಂದೂ ಎನ್ನಲು ಬಿಜೆಪಿಯಿಂದ ಸರ್ಟಿಫಿಕೇಟ್ ಪಡೆಯಬೇಕಾಗಿಲ್ಲ’ಎಂದರು.
ರಾಮನಗರ–ಚನ್ನಪಟ್ಟಣ ನಡುವೆ ನಿಖಿಲ್ ಮದುವೆ: ‘ಮಂಡ್ಯ ಜಿಲ್ಲೆಗೆ ಹತ್ತಿರವಾಗಲಿ ಎಂಬ ಕಾರಣಕ್ಕೆ ರಾಮನಗರ–ಚನ್ನಪಟ್ಟಣ ನಡುವೆ ನಿಖಿಲ್ ಮದುವೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಸಾಧ್ಯವಾದಷ್ಟು ನಾನೇ ಸ್ವತಃ ಮಂಡ್ಯಜಿಲ್ಲೆಯ ಪ್ರತಿ ಮನೆಮನೆಗೂ ಬಂದು ಆಹ್ವಾನ ಪತ್ರಿಕೆ ನೀಡುತ್ತೇನೆ. ಮಗನ ಮದುವೆ ಹಿನ್ನೆಲೆಯಲ್ಲಿ ನನ್ನನ್ನು ಬೆಳೆಸಿದ ಜನರಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಊಟ ಹಾಕಿಸುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.