ADVERTISEMENT

ಸ್ವಾತಂತ್ರ್ಯ ಚಳವಳಿಯ ಆಶಯ ಈಡೇರಿಲ್ಲ– ತೀಸ್ತಾ ಸೆಟಲ್‌ವಾಡ್‌

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 12:53 IST
Last Updated 29 ಜನವರಿ 2023, 12:53 IST
ತೀಸ್ತಾ ಸೆಟಲ್‌ವಾಡ್‌
ತೀಸ್ತಾ ಸೆಟಲ್‌ವಾಡ್‌   

ಶ್ರೀರಂಗಪಟ್ಟಣ (ಮಂಡ್ಯ): ‘ಸ್ವಾತಂತ್ರ್ಯಕ್ಕಾಗಿ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್‌ ಸೇರಿದಂತೆ ಎಲ್ಲಾ ಧರ್ಮೀಯರು ಹೋರಾಟ ಮಾಡಿದ್ದಾರೆ. ಆದರೆ, ಸ್ವಾತಂತ್ರ್ಯ ಹೋರಾಟದ ಮಹತ್ತರ ಆಶಯ ಇನ್ನೂ ಈಡೇರದೇ ಇರುವುದು ದುರದೃಷ್ಟಕರ’ ಎಂದು ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್‌ ವಿಷಾದಿಸಿದರು.

ಸಮಾನ ಮನಸ್ಕರ ವೇದಿಕೆ ವತಿಯಿಂದ ಭಾನುವಾರ ಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯದ ಮೈದಾನದಲ್ಲಿ ಏರ್ಪಡಿಸಿದ್ದ ‘ಸಾಮರಸ್ಯ ಸಹಬಾಳ್ವೆ ಸಂಗಮ’ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಬಹು ಸಂಸ್ಕೃತಿಯ ಸಮೃದ್ಧ ಸಮಾಜ ನಿರ್ಮಾಣ ಸ್ವಾತಂತ್ರ್ಯ ಹೋರಾಟದ ಮುಖ್ಯ ಆಶಯವಾಗಿತ್ತು. ಆದರೆ ಪ್ರಸ್ತುತ ಸಂದರ್ಭದಲ್ಲಿ ಈ ಆಶಯಕ್ಕೆ ವಿರುದ್ಧವಾದ ಘಟನೆಗಳು ನಡೆಯುತ್ತಿವೆ. ಇತಿಹಾಸದ ಘಟನೆಗಳನ್ನು ಮುಂದಿಟ್ಟಕೊಂಡು ಸಮಾಜ ಒಡೆಯುವ ಹುನ್ನಾರ ಮಾಡಲಾಗುತ್ತಿದೆ. ಅದಕ್ಕೆ ಪ್ರತಿರೋಧ ಒಡ್ಡಬೇಕಾದ ಅನಿವಾರ್ಯತೆ ಇದೆ. ಆದಿವಾಸಿ, ಮುಸ್ಲಿಂ, ದಲಿತ, ಕ್ರೈಸ್ತರಲ್ಲಿ ಅನಾಥ ಪ್ರಜ್ಞೆ ಕಾಡದಂತೆ ಅವರಿಗೆ ದನಿಯಾಗಿ ನಿಲ್ಲಬೇಕಿದೆ’ ಎಂದರು.

ADVERTISEMENT

‘ನಾಥೂರಾಂ ಗೂಡ್ಸೆ ಸ್ವತಂತ್ರ ಭಾರತದ ಮೊದಲ ಉಗ್ರಗಾಮಿಯಾಗಿದ್ದ. ಆತ 4 ಬಾರಿ ಗಾಂಧೀಜಿಯನ್ನು ಹತ್ಯೆ ಮಾಡಲು ಯತ್ನಿಸಿದ್ದ. 3 ಬಾರಿ ವಿಫಲನಾಗಿದ್ದ ಆತ 4ನೇ ಬಾರಿ ಸಫಲನಾದ. ಇಂತಹ ಗೂಡ್ಸೆ ಮನಸ್ಥಿತಿಯುಳ್ಳವರು ನಮ್ಮ ನಡುವೆ ಇಂದಿಗೂ ಇದ್ದಾರೆ’ ಎಂದರು.

ನಿವೃತ್ತ ಐಎಎಸ್‌ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌ ಮಾತನಾಡಿ ‘ಬಲ ಪಂಥೀಯರು ನ್ಯಾಯಾಂಗ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಸೇರಿಕೊಂಡಿರುವುದು ಅಪಾಯಕಾರಿ ಬೆಳವಣಿಗೆ. ಆ ಕಾರಣಕ್ಕೆ ತೀಸ್ತಾ ಸೆಟಲ್‌ವಾಡ್‌ ಅವರಂತಹ ಜೀವಪರ ವ್ಯಕ್ತಿಗಳನ್ನು ಬಂಧಿಸಿ ಕಿರುಕುಳ ನೀಡಲಾಗುತ್ತಿದೆ. ರಾಜಕೀಯ ಕಾರಣಕ್ಕಾಗಿ ಟಿಪ್ಪು ಸುಲ್ತಾನ್‌ ವ್ಯಕ್ತಿತ್ವಕ್ಕೆ ಕಳಂಕ ಅಂಟಿಸಲಾಗುತ್ತಿದೆ. ತಪ್ಪುಗಳ ವಿರುದ್ಧ ದನಿ ಎತ್ತದೆ ಮೌನ ವಹಿಸಿದರೆ ಮತ್ತಷ್ಟು ಅನ್ಯಾಯಗಳಿಗೆ ಅವಕಾಶ ನೀಡಿದಂತಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.