ADVERTISEMENT

ನಾಗಮಂಗಲ; ಪ್ರತಿಮೆ ನಿರ್ಮಾಣ ಪುಣ್ಯದ ಕೆಲಸ- ಎಚ್.ಡಿ.ದೇವೇಗೌಡ

ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ಎಚ್‌.ಡಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 5:09 IST
Last Updated 18 ಏಪ್ರಿಲ್ 2022, 5:09 IST
ನಾಗಮಂಗಲ ಪಟ್ಟಣದ ಬಡಗೂಡಮ್ಮ ದೇವಾಲಯದ ಆವರಣದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು
ನಾಗಮಂಗಲ ಪಟ್ಟಣದ ಬಡಗೂಡಮ್ಮ ದೇವಾಲಯದ ಆವರಣದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು   

ನಾಗಮಂಗಲ: ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡುವ ಪುಣ್ಯದ ಕೆಲಸವನ್ನು ಮಾಡಿ ಇಂದಿನ ಪೀಳಿಗೆಗೆ ಅವರ ತತ್ವಾದರ್ಶಗಳನ್ನು ತಿಳಿಸುವ ಕೆಲಸ ಮಾಡಿರುವುದು ಶ್ಲಾಘನೀಯ ಎಂದು ರಾಜ್ಯ ಸಭಾ ಸದಸ್ಯ ಎಚ್.ಡಿ.ದೇವೇಗೌಡ ಹೇಳಿದರು.

ಪಟ್ಟಣದ ಟಿ‌.ಬಿ.ಬಡಾವಣೆಯ ಬಡಗೂಡಮ್ಮ ದೇವವಾಲಯದ ಆವರಣದಲ್ಲಿ ಭಾನುವಾರ ಆಯೋ ಜಿಸಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಮಿನಿ ವಿಧಾನ ಸೌಧದ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ, ಪ್ರತಿಮೆ ನಿರ್ಮಾಣಕ್ಕೆ ಸಹಕಾರ ನೀಡಿದ ಪ್ರಮುಖರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಂಬೇಡ್ಕರ್ ಕೆಳವರ್ಗದ ಜನರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ ಮಹಾನ್ ವ್ಯಕ್ತಿ. ನಾನೂ ಕಂಟ್ರಾಕ್ಟರ್ ಆಗಿದ್ದಾಗ ಪಾಪಯ್ಯ ಎಂಬ ವ್ಯಕ್ತಿಗೆ ಅನ್ಯಾಯವಾಗುತ್ತಿತ್ತು. ಅದನ್ನು ನೋಡಿ 60 ವರ್ಷಗಳ ಹಿಂದೆ ನಾನು ಜಾತಿ ವ್ಯವಸ್ಥೆ ವಿರುದ್ಧ ಮತ್ತು ಶ್ರೀಮಂತರಿಂದ ಶೋಷಣೆಗೆ ಒಳಗಾಗುತ್ತಿದ್ದವರ ಪರವಾಗಿ ಹೋರಾಟ ಮಾಡಿದ್ದರ ಫಲವಾಗಿಯೇ ಇಲ್ಲಿಯವರೆಗೆ ಬರಲು ಸಾಧ್ಯವಾಯಿತು’ ಎಂದು ಹೇಳಿದರು.

ADVERTISEMENT

ಜೆಡಿಎಸ್ ಉಳಿವು ನಿಮ್ಮ ಮೇಲಿದೆ: ಜೆಡಿಎಸ್ ಪಕ್ಷವು ನಾಡಿನ ನೆಲ, ಜಲ ಸೇರಿದಂತೆ ಕನ್ನಡ ಭಾಷೆ ಮತ್ತು ಕನ್ನಡಪರ ಹೋರಾಟ ಮಾಡುತ್ತಿರುವ ಪ್ರಾದೇಶಿಕ ಪಕ್ಷವಾಗಿದ್ದು, ಅದನ್ನು ಉಳಿಸುವುದು, ಬೆಳೆಸುವ ಹೊಣೆ ನಿಮ್ಮೆಲ್ಲರ ಮೇಲಿದೆ. ಜೆಡಿಎಸ್ ಪಕ್ಷವನ್ನು ಬಲವಾಗಿ ಬೆಳೆಸಿ ಅಧಿಕಾರಕ್ಕೆ ತರಬೇಕು ಎನ್ನುವುದು ನನ್ನ ಆಸೆ. ಆ ನಿಟ್ಟಿನಲ್ಲಿ ಸುರೇಶ್ ಗೌಡ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು.

ಶಾಸಕ ಸುರೇಶ್ ಗೌಡ ಮಾತನಾಡಿ, ವಿವಾದಗಳ ಕಾರಣದಿಂದ ಪ್ರತಿಮೆ ಸ್ಥಾಪಿಸಲು ಆಗಿರಲಿಲ್ಲ. ಈಗ ಪ್ರತಿಮೆ ಸ್ಥಾಪಿಸಲು ಸಹಕಾರ ನೀಡಿದವರು ಅಭಿನಂದನೀಯರು ಎಂದರು.

ಎಚ್.ಡಿ.ದೇವೇಗೌಡ ಅವರಿಗೆ ಬೆಳ್ಳಿ ಕೀರಿಟ ತೊಡಿಸಿ ಸನ್ಮಾನಿಸಲಾಯಿತು. ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಶ್ರಮಿಸಿದ ಮುಖಂಡರನ್ನು ಮತ್ತು ಸಂಘದ ಅಧ್ಯಕ್ಷರನ್ನು ಗೌರವಿಸಲಾಯಿತು.

ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಲು, ಜಿ.ಪಂ.ಮಾಜಿ ಸದಸ್ಯರಾದ ಶಿವಪ್ರಕಾಶ್, ಮುತ್ತಣ್ಣ, ಪುರಸಭೆ ಅಧ್ಯಕ್ಷೆ ಆಶಾ, ಉಪಾಧ್ಯಕ್ಷ ಜಾಫರ್ ಷರೀಫ್, ಸ್ಥಾಯಿ ಸಮಿತಿ ಅಧ್ಯಕ್ಷ ಚನ್ನಪ್ಪ, ಸದಸ್ಯ ವರದರಾಜು, ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ಪರಿಶಿಷ್ಟ ಜಾತಿ ಮತ್ತು ಪಂಗಡದ ಯುವ ಅಧ್ಯಕ್ಷ ಲೋಹಿತ್, ದಲಿತ ಮುಖಂಡರಾದ ಶಿವರಾಮಣ್ಣ, ವೆಂಕಟಗಿರಿ, ಸೋಮಶೇಖರ್, ಅನ್ನದಾನಿ, ಕಂಚಿಕೋಟೆ ಮೂರ್ತಿ, ಮಂಜುನಾಥ್, ಮುಖಂಡರಾದ ನಾಗೇಶ್, ಕೋಟಿ ರವಿ, ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.