
ನಾಗಮಂಗಲ: ‘ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಇಡದೆ ಅಪಮಾನ ಮಾಡಿದರೆ ಸಹಿಸುವುದಿಲ್ಲ. ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟ ನಿಶ್ಚಿತ’ ಎಂದು ದಲಿತ ಮುಖಂಡರು ಒಕ್ಕೊರಲಿನಿಂದ ಎಚ್ಚರಿಕೆ ನೀಡಿದರು.
ಟಿ.ಬಿ ಬಡಾವಣೆಯ ಅಂಬೇಡ್ಕರ್ ಭವನದಲ್ಲಿ ಬುಧವಾರ ತಾಲ್ಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಹಿತರಕ್ಷಣಾ ಸಮಿತಿ ಸಭೆಯಲ್ಲಿ ದಲಿತ ಮುಖಂಡರು ಮಾತನಾಡಿದರು. ದಲಿತ ಮುಖಂಡ ಕಂಚಿನ ಕೋಟೆ, ಕ್ಯಾತನಹಳ್ಳಿ ಮಂಜು, ಹಿರಿಯ ದಲಿತ ಮುಖಂಡ ನಂಜುಂಡಯ್ಯ ಮಾತನಾಡಿದರು.
ತಾಲ್ಲೂಕಿನಾದ್ಯಂತ ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದಂತೆ 171 ಸ್ಮಶಾನಗಳ ಪೈಕಿ 71 ಮಂಜೂರು ಆಗಿದೆ ಎಂದು ಸಭೆಯಲ್ಲಿ ಮಾಹಿತಿ ತಿಳಿಸಲಾಯಿತು. ದಲಿತ ಮುಖಂಡರು ಎಲ್ಲೆಲ್ಲಿ ಸ್ಮಶಾನ ಆಗಿದೆ. ಅದರ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
‘ಅಧಿಕಾರಿಗಳು ನೀಡುವ ಬರೆಯುವ ಸುಳ್ಳು ವರದಿಗಳಿಂದ ಸಮಸ್ಯೆಗಳು ಉಲ್ಬಣವಾಗುತ್ತಿವೆ. ಹಣ ಪಡೆದು ಇಲ್ಲ ಪ್ರಭಾವಿ ರಾಜಕಾರಣಿಗಳ ಮಾತಿಗೆ ಬೆಲೆಕೊಟ್ಟು ವರದಿಗಳನ್ನು ತಿರುಗುವುದು, ಸತ್ಯ ಮರೆ ಮಾಚುವುದರಿಂದ ತಾಲ್ಲೂಕಿನಾದ್ಯಂತ ಸಮಸ್ಯೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕೂಡಲೆ ಅಧಿಕಾರಿಗಳ ಇಂತಹ ವರ್ತನೆ ನಿಲ್ಲಿಸಿ’ ಎಂದು ತಾಕಿತು ಮಾಡಿದರು.
ತಹಶೀಲ್ದಾರ್ ಆದರ್ಶ, ಡಿವೈಎಸ್ಪಿ ಚಲುವರಾಜು, ತಾಲ್ಲೂಕು ಆರೋಗ್ಯ ನಿರೀಕ್ಷಕ ನಾರಾಯಣ, ಪುರಸಭೆ ಮುಖ್ಯಾಧಿಕಾರಿ ವೀಣಾ ಸೇರಿದಂತೆ ಇತರೆ ಅಧಿಕಾರಿಗಳು ಸಮಸ್ಯೆಗಳನ್ನು ಆಲಿಸಿ ಪರಿಕಾರ ಕಲ್ಪಿಸುವ ಕುರಿತು ಭರವಸೆ ನೀಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.