ಮಂಡ್ಯ: ಶಸ್ತ್ರಗಳ ಹಬ್ಬವೆಂದೇ ಖ್ಯಾತಿ ಪಡೆದಿರುವ ಆಯುಧ ಪೂಜಾ ಮುನ್ನದಿನವಾದ ಮಂಗಳವಾರ ಜಿಲ್ಲೆಯಲ್ಲಿ ಹಬ್ಬದ ಸಿದ್ಧತೆಗೆಂದು ವ್ಯಾಪಾರದ ಭರಾಟೆ ಜೋರಾಗಿ ನಡೆಯಿತು.
ಮಂಗಳವಾರದಿಂದಲೇ ಅಂಗಡಿ ಮಾಲೀಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಅಂಗಡಿ-ಮುಂಗಟ್ಟುಗಳನ್ನು ಸ್ವಚ್ಛಗೊಳಿಸಿ ಪೂಜೆಗೆ ಸಿದ್ಧಗೊಳಿಸುವ ಕಾರ್ಯ ನಡೆದಿತ್ತು. ಹಬ್ಬದಲ್ಲಿ ಕಚೇರಿ, ವಾಹನಗಳಿಗೆ ವಿಶೇಷ ಪೂಜೆ ನಡೆಯುವ ಹಿನ್ನೆಲೆಯಲ್ಲಿ ಜನರು ಅಗತ್ಯವಸ್ತು ಖರೀದಿ ಮಾಡಿದರು.
ನಗರದ ಬೆಂಗಳೂರು-ಮೈಸೂರು ಹೆದ್ದಾರಿ ಬದಿ, ರೈಲ್ವೆ ಗೇಟ್ ಬಳಿಯ ನಗರಸಭೆ ವಾಣಿಜ್ಯ ಸಂಕೀರ್ಣ, ಮಹಾವೀರ ವೃತ್ತ, ವಿ.ವಿ ರಸ್ತೆ, ಕಲಾಮಂದಿರ ರಸ್ತೆ, ಅಂಚೆ ಕಚೇರಿ ವೃತ್ತ, ಗಾಂಧಿಭವನ ವೃತ್ತ, ಹೊಳಲು ವೃತ್ತ, ಹೊಸಹಳ್ಳಿ ವೃತ್ತ, ಕರ್ನಾಟಕ ಬಾರ್ ವೃತ್ತ, ತರಕಾರಿ ಮಾರುಕಟ್ಟೆ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಹಿವಾಟು ನಡೆಸುತ್ತಿದ್ದ ಕಂಡು ಬಂದಿತು. ಜನಜಂಗುಳಿಯಿಂದ ಅಲ್ಲಲ್ಲಿ ಸಂಚಾರ ದಟ್ಟಣೆ ಇತ್ತು.
ನಗರಾದ್ಯಂತ ಬಾಳೆ ಕಂದು, ಹೂವು, ಮಾವಿನ ಸೊಪ್ಪು, ಬೂದಗುಂಬಳದ ರಾಶಿ ಕಾಣುತ್ತಿತ್ತು. ವಿ.ವಿ.ರಸ್ತೆಯಲ್ಲಿ ಬೂದಗುಂಬಳದ ರಾಶಿ, ಸೇವಂತಿ ಹೂವುಗಳಿಂದ ಕಂಗೊಳಿಸುತ್ತಿತ್ತು. ಬಾಳೆಹಣ್ಣು, ಹೂವು ಮಾರುತ್ತಿದ್ದ ಬಹುತೇಕ ವ್ಯಾಪಾರಿಗಳು ತರಕಾರಿ ಮಾರುಕಟ್ಟೆ, ರೈಲ್ವೆ ಗೇಟ್ ಬಳಿ, ವಿ.ವಿ.ರಸ್ತೆ, ಬೆಂಗಳೂರು-ಮೈಸೂರು ಹೆದ್ದಾರಿ ಬದಿಯಲ್ಲಿ ಜಮಾಯಿಸಿದ್ದರು. ವಾಹನ ದುರಸ್ತಿ, ವಾಟರ್ ಸರ್ವೀಸ್ಗಳು ಬ್ಯುಸಿಯಾಗಿದ್ದವು. ಮಾಲೀಕರು ವಾಹನಗಳನ್ನ ಸರತಿ ಸಾಲಿನಿಲ್ಲಿ ನಿಲ್ಲಿಸಿಕೊಂಡು ಸರ್ವೀಸ್ ಮಾಡಿಸಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂದಿತು.
ಹೂವಿನ ಬೆಲೆ: ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಸೇವಂತಿಗೆ ಸೋಮವಾರ ₹100 ಗಡಿ ದಾಟಿದ್ದರೆ, ಮಂಗಳವಾರ ₹130 ರಿಂದ ₹200 ಏರಿಕೆ ಕಂಡಿತು. ಕನಕಾಂಬರ ₹250, ಮಲ್ಲಿಗೆ ₹250, ಕಾಕಡ ₹150 ರಿಂದ ₹200, ಕಣಗಲೆ ₹100 ಪ್ರತಿ ಮಾರಿಗೆ ಮಾರಾಟವಾಗುತ್ತಿದ್ದರೆ, ಒಂದು ಗುಲಾಬಿ ಹೂವಿಗೆ ₹20 ರಂತೆ ಹಾಗೂ 100 ಗ್ರಾಂ ಸಣ್ಣ ಗುಲಾಬಿ ಹೂವು, ಬಟನ್ಸ್, ಸೇವಂತಿಗೆ ಹೂವಿನ ಬೆಲೆ ₹50 ರಂತೆ ಮಾರಾಟವಾಗುತ್ತಿದ್ದವು. ದಾಖಲೆ ಮಟ್ಟದಲ್ಲಿ ಹೂವಿನ ಹಾರ ಮಾರಾಟವಾಗುತ್ತಿದ್ದು, ಸುಗಂಧರಾಜ ಹೂವಿನಿಂದ ಕಟ್ಟಿದ ಸಾಮಾನ್ಯ ಎತ್ತರದ ಒಂದು ಹಾರಕ್ಕೆ ₹200, ಅದರಂತೆ ₹200 ರಿಂದ ₹4000 ದವರೆವಿಗೂ ಹಾರಗಳು ಮಾರಾಟವಾದವು. ಆಕರ್ಷಕ ರುದ್ರಾಕ್ಷಿ ಹೂವು ಮತ್ತು ಗುಲಾಬಿ ಹೂವುಗಳ ಹಾರಕ್ಕೆ ಹೆಚ್ಚು ಬೇಡಿಕೆಯಿತ್ತು.
ಹಣ್ಣುಗಳ ಬೆಲೆ: ಹಣ್ಣುಗಳ ಬೆಲೆ ಹೆಚ್ಚಳವಾಗಿತ್ತು, ಏಲಕ್ಕಿ ಬಾಳೆ ₹100, ಪಚ್ಚಬಾಳೆ ₹60, ಸೇಬು ₹140 ರಿಂದ ₹160, ಕಿತ್ತಳೆ ₹100, ಮೂಸಂಬಿ ₹80 ರಿಂದ ₹100, ದ್ರಾಕ್ಷಿ ₹160, ಸಪೋಟ ₹100, ಪಪ್ಪಾಯಿ ₹40, ಸೀತಾಫಲ ₹200, ಮರಸೇಬು ₹150, ಸೀಬೆಹಣ್ಣು ₹80 ಪ್ರತಿ ಕೆಜಿಗೆ ಮಾರಾಟಮಾಡಲಾಗುತ್ತಿತ್ತು.
ಹಬ್ಬದ ವಿಶೇಷ ಬೂದುಗುಂಬಳ: ಆಯುಧಪೂಜೆ ಹಬ್ಬದಲ್ಲಿ ವಿಶೇಷ ಸ್ಥಾನ ಪಡೆದಿರುವ ಬೂದಗುಂಬಳಕ್ಕೆ ಬೇಡಿಕೆ ಸ್ವಲ್ಪ ಹೆಚ್ಚಾಗಿಯೇ ಇತ್ತು. ನಗರ ಪ್ರಮುಖ ರಸ್ತೆ ಬದುವಿನಲ್ಲಿಯೆ ಬೂದುಗುಂಬಳ ವ್ಯಾಪಾರದ ಭರಾಟೆ ಜೋರಾಗಿ ನಡೆದಿತ್ತು. ಅದರಂತೆ ಪ್ರತಿ ಕೆ.ಜಿ ₹30 ರಂತೆ ಮಾರಾಟ ಮಾಡಲಾಗುತ್ತಿತ್ತು. ಒಂದು ಜತೆ ಬಾಳೆ ಕಂದಿಗೆ ₹45 ರಿಂದ ₹200 ವರೆಗಿತ್ತು. ಕಬ್ಬಿನ ತೊಂಡೆಗೆ ₹20, ಬೂದಗುಂಬಳಕ್ಕೆ ₹80 ರಿಂದ ₹500 ಬೆಲೆ ನಿಗದಿಯಾಗಿತ್ತು.
ಗ್ರಾಹಕರು ಸಹ ಚೌಕಾಸಿ ಮಾಡಿ ಹೂವು, ಹಣ್ಣು, ಬಾಳೆಕಂದು, ಬೂದಗುಂಬಳ ಖರೀದಿಸುತ್ತಿದ್ದರು, ಸಿಹಿ ತಿನಿಸುಗಳನ್ನು ಕೊಂಡುಕೊಳ್ಳಲು ಪ್ರಮುಖ ಬೇಕರಿಗಳಲ್ಲಿ ಜನದಟ್ಟಣೆ ಹೆಚ್ಚಿತ್ತು. ಒಟ್ಟಿನಲ್ಲಿ ಆಯುಧಪೂಜಾ ಸಿದ್ಧತೆಗೆಂದು ಖರೀದಿಯಲ್ಲಿ ನಿರತರಾಗಿದ್ದ ಗ್ರಾಹಕರು ಹಬ್ಬದ ತಯಾರಿಯ ಸಿದ್ಧತೆಗೆಂದು ಭರ್ಜರಿ ವ್ಯಾಪಾರವನ್ನೇ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.