ಮಂಡ್ಯ: ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ವರದಿ ಅನ್ವಯ ಆಯುಷ್ ಇಲಾಖೆ ವೈದ್ಯಾಧಿಕಾರಿಗಳಿಗೆ ಸಮಾನ ವೇತನ, ಭತ್ಯೆಗಳನ್ನು ನೀಡಬೇಕು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಸದಸ್ಯರು ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿ ಶೈಲಜಾ ಅವರಿಗೆ ಮನವಿ ಸಲ್ಲಿಸಿದರು.
ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ ಆಯುಷ್ ವೈದ್ಯ ಪದ್ಧತಿಗಳ ಚಿಕಿತ್ಸೆ ಅಪೇಕ್ಷೆ ಪಡುವವರಿಗೆ ಒದಗಿಸಲು ಅವಕಾಶ ನೀಡಬೇಕು. ಕೋವಿಡ್-19 ಚಿಕಿತ್ಸಾ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಯುಷ್ ವೈದ್ಯಾಧಿಕಾರಿಗಳಿಗೆ ಪ್ರೋತ್ಸಾಹ ಧನ ಯೋಜನೆ ವಿಸ್ತರಿಸಬೇಕು. ಆಯುಷ್ ಇಲಾಖೆಗೆ ಒಂದು ಬಾರಿ ಸೇವೆಗೆ ಸೇರಿದ ವೈದ್ಯರು ನಿವೃತ್ತಿವರೆಗೂ ವೈದ್ಯಾಧಿಕಾರಿ ಎಂಬ ಒಂದೇ ಪದನಾಮದಿಂದ ಸೇವೆ ನಿರ್ವಹಿಸಬೇಕಾಗಿದ್ದು, ಆದ್ದರಿಂದ ಪ್ರಸ್ತುತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವಾಲಯದಲ್ಲಿ ಚಾಲನೆಯಲ್ಲಿರುವ ಕಡತಕ್ಕೆ ಅನುಮೋದನೆ ನೀಡಬೇಕು. ಎಲ್ಲಾ ವೈದ್ಯಾಧಿಕಾರಿ ಹುದ್ದೆಗಳನ್ನು ಮರು ಪದನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.
ಗುತ್ತಿಗೆ ವೈದ್ಯಾಧಿಕಾರಿಗಳ ಸೇವಾವಧಿಯನ್ನು ನಿವೃತ್ತಿ ಹೊಂದುವ ಸಂದರ್ಭದಲ್ಲಿ ನಿವೃತ್ತಿ ಸೇವಾ ಸೌಲಭ್ಯಗಳಿಗೆ ಗುತ್ತಿಗೆ ಸೇವಾ ಅವಧಿಯನ್ನು ಪರಿಗಣಿಸಲು ಆದೇಶಿಸಬೇಕು. ಆಯುಷ್ ಇಲಾಖೆಯಲ್ಲಿ ಹಲವು ವರ್ಷಗಳಿಂದ ವೈದ್ಯಾಧಿಕಾರಿಗಳು, ಡಿ ದರ್ಜೆ ನೌಕರರು, ಔಷಧ ವಿತರಕರ ಹುದ್ದೆಗಳು ಖಾಲಿ ಇದ್ದು, ಚಿಕಿತ್ಸಾಲಯಗಳಲ್ಲಿ ಸಾರ್ವಜನಿಕರಿಗೆ ಸೇವೆ ನೀಡಲು ತೊಂದರೆಯಾಗಿದೆ. ಆದ್ದರಿಂದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಮನವಿ ಮಾಡಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಪ್ರಸನ್ನಕುಮಾರ್, ಕಾರ್ಯದರ್ಶಿ ಡಾ. ಲೋಕೇಶ್, ಡಾ.ಬಿ.ಎನ್.ಸೌಮ್ಯಾ, ಡಾ.ಸುಹಾಸಿನಿ, ಡಾ.ರಮ್ಯಾ, ಡಾ.ಕವಿತಾ, ಡಾ.ಅಂಬಾಭವಾನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.