ಬೆಳಕವಾಡಿ: ‘ಗ್ರಾಮ ಪಂಚಾಯಿತಿ ಅಧ್ಯಕ್ಷರ ಸಾಮಾಜಿಕ ಕಳಕಳಿಯ ಫಲವಾಗಿ ಬೆಳಕವಾಡಿ ಗ್ರಾಮದ ದೊಡ್ಡಕೆರೆಯ ಒತ್ತುವರಿ ತೆರವು ಮಾಡ ಲಾಗಿದೆ’ ಎಂದು ಕರಪತ್ರ ಮುದ್ರಿಸಿ ಮನೆ ಮನೆಗೆ ಹಂಚಿರುವ ಪ್ರಕರಣ ಸಂಬಂಧ ತಹಶೀಲ್ದಾರ್ ಕೆ.ಚಂದ್ರಮೌಳಿ ಅವರು ಗ್ರಾಮ ಪಂಚಾಯಿತಿಗೆ ನೋಟಿಸ್ ಜಾರಿ ಮಾಡಿದ್ದಾರೆ.
40 ಎಕರೆ 11 ಗುಂಟೆ ವಿಸ್ತೀರ್ಣ ಹೊಂದಿರುವ ದೊಡ್ಡಕೆರೆಯ ನಾಲ್ಕು ಎಕರೆ ಪ್ರದೇಶ ಒತ್ತುವರಿಯಾಗಿದ್ದು, ಇದನ್ನು ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಸೋಮು ಅವರು ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದ್ದರು. ತಾಲ್ಲೂಕು ಆಡಳಿತ, ಸರ್ವೆ ಇಲಾಖೆ ಅಧಿಕಾರಿಗಳು ಕಳೆದ ಸೋಮವಾರ ಹಾಗೂ ಮಂಗಳವಾರ ಸರ್ವೆ ಕಾರ್ಯ ನಡೆಸಿದ್ದು, ಕೇವಲ 5 ಗುಂಟೆ ಜಾಗ ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸಿದ್ದರು.
‘ಈ ತೆರವು ಕಾರ್ಯಾಚರಣೆಯು ಗ್ರಾ.ಪಂ ಅಧ್ಯಕ್ಷರಿಂದಲೇ ಆಗಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರವೂ ಮುಖ್ಯ. ಜನರು ಸಹ ಸ್ಥಳಕ್ಕೆ ಬಂದು ಕಾರ್ಯಾಚರಣೆಯನ್ನು ವೀಕ್ಷಿಸಬೇಕು’ ಎಂದು ಕರಪತ್ರದಲ್ಲಿ ಮುದ್ರಿಸಲಾಗಿತ್ತು. ಈ ಸಂಬಂಧ ನೋಟಿಸ್ ಜಾರಿ ಮಾಡಲಾಗಿದೆ. ತಾಲ್ಲೂಕು ಆಡಳಿತ ನೀಡಿರುವ ನೋಟಿಸ್ಗೆ ಪಿಡಿಒ ಇನ್ನೂ ಉತ್ತರ ನೀಡಿಲ್ಲ.
ತೆರವು ಕಾರ್ಯಾಚರಣೆ ನಡೆಸಬೇಕು ಎಂದು ಗ್ರಾ.ಪಂ ಅಧ್ಯಕ್ಷ ಪಿ.ಸೋಮು ಹಾಗೂ ಕೆಲಸ ಸದಸ್ಯರು ವೈಯಕ್ತಿಕವಾಗಿ ಮನವಿ ಮಾಡಿದ್ದರು. ಇದಕ್ಕೂ ಗ್ರಾಮ ಪಂಚಾಯಿತಿಗೂ ಸಂಬಂಧವಿಲ್ಲ ಎಂದು ಪಿಡಿಒ ಎನ್.ಶಿವಸ್ವಾಮಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.