ADVERTISEMENT

ಭಾರತೀನಗರ: ಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ‘ಶಿವರಾತ್ರಿ’ ಸಡಗರ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 5:08 IST
Last Updated 15 ಫೆಬ್ರುವರಿ 2026, 5:08 IST
ಭಾರತೀನಗರ ಸಮೀಪದ ಹನುಮಂತನಗರದ ಶ್ರೀಆತ್ಮಲಿಂಗೇಶ್ವರ ದೇವಾಲಯದ ವಿಹಂಗಮ ನೋಟ
ಭಾರತೀನಗರ ಸಮೀಪದ ಹನುಮಂತನಗರದ ಶ್ರೀಆತ್ಮಲಿಂಗೇಶ್ವರ ದೇವಾಲಯದ ವಿಹಂಗಮ ನೋಟ   

ಭಾರತೀನಗರ: ಸಮೀಪದ ಹನುಮಂತನಗರದ ಆತ್ಮಲಿಂಗೇಶ್ವರ ಪುಣ್ಯ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಫೆ.15ರಂದು ನಡೆಯಲಿದೆ. ಐತಿಹಾಸಿಕ ದನಗಳ ಜಾತ್ರೆಗೆ ಅದ್ದೂರಿ ಚಾಲನೆ ಸಿಕ್ಕಿದೆ. 

ಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ 33 ವರ್ಷಗಳಿಂದಲೂ ಶಿವರಾತ್ರಿ ಉತ್ಸವಗಳು ಹಾಗೂ ರಥೋತ್ಸವ ಕಾರ್ಯಕ್ರಮಗಳು ನಡೆದುಕೊಂಡು ಬಂದಿವೆ. ಈ ನಿಟ್ಟಿನಲ್ಲಿ 6 ದಿನಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ.

ವಿವಿಧ ಜಿಲ್ಲೆಗಳಿಂದ ರೈತರು ರಾಸುಗಳನ್ನು ಕೊಳ್ಳಲು ಹಾಗೂ ಮಾರಾಟ ಮಾಡಲು ಮುಂದಾಗಿದ್ದಾರೆ. ಕೆಲವರು ಹಸುಗಳನ್ನು ಕೊಳ್ಳಲೆಂದೇ ದೂರದಿಂದ ಬರುತ್ತಿದ್ದಾರೆ. ಪ್ರದರ್ಶನಕ್ಕೆ ದಿಬ್ಬಗಳ ನಿರ್ಮಾಣ ಮತ್ತು ಶೆಡ್‌ಗಳ ಕೆಲಸವನ್ನು ಗೋಪಾಲಕರು ಪ್ರಾರಂಭಿಸಿದ್ದಾರೆ.

ADVERTISEMENT

ಬಿ.ಇ.ಟಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಶಯ್ ಜಿ. ಮಧು ಅವರು ಜಾತ್ರೆಯ ಪೂರ್ವಸಿದ್ಧತೆ ಪರಿಶೀಲಿಸಿ ಮಾತನಾಡಿ, ‘ಈಗಾಗಲೇ 10ನೇ ತಾರೀಖಿನಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಸಾಮಾನ್ಯವಾಗಿ ಸುಗ್ಗಿ ಕಾಲದ ಬಳಿಕ ಪ್ರಾರಂಭವಾಗುವ ದನಗಳ ಜಾತ್ರೆ ಕೃಷಿಕರಿಗೆ ವಿಷಯ ವಿನಿಮಯಕ್ಕೆ ಅತ್ಯುತ್ತಮ ವೇದಿಕೆಯಾಗಿದೆ’ ಎಂದರು. 

ಜಾತ್ರೆಗೆ ಆಗಮಿಸುವ ಜನ ಮತ್ತು ರಾಸುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ ಸೇರಿ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಜಾತ್ರಾ ಮಹೋತ್ಸವ ಪಕ್ಷಾತೀತವಾಗಿ ನಡೆಯುತ್ತಿದೆ. ಎಲ್ಲ ಪಕ್ಷದವರೂ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕಾರ್ಯದರ್ಶಿ ಸಿದ್ದೇಗೌಡ ಮಾತನಾಡಿ, ಫೆ.13ರವರೆಗೆ ದನಗಳ ಜಾತ್ರೆ ನಡೆಯಲಿದ್ದು, ಬೇರೆ ಜಿಲ್ಲೆಗಳಿಂದಲೂ ರಾಸಗುಳ ಆಗಮನವಾಗಿದೆ. 30 ಬಹುಮಾನಗಳನ್ನು ನೀಡಲಾಗುವುದು. ಫೆ.18ರಂದು ಭಾರತಿ ಎಜುಕೇಷನ್ ಟ್ರಸ್ಟ್ ಆವರಣದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಸುಗಳಿಗೆ ಬಹುಮಾನ ವಿತರಣೆ ಮಾಡಲಾಗುವುದೆಂದು ತಿಳಿಸಿದರು.

ಅಣ್ಣೂರು ಸೊಸೈಟಿ ನಿರ್ದೇಶಕ ಆರ್.ಸಿದ್ದಪ್ಪ, ಆತ್ಮಲಿಂಗೇಶ್ವರ ಮಂಡಳಿಯ ಸದಸ್ಯರು ಹಾಗೂ ಬಿಇಟಿ ವಿವಿಧ ವಿಭಾಗದ ಮುಖ್ಯಸ್ಥರು ಇದ್ದರು. 

ಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ದನಗಳ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಲು ಕೋರುತ್ತೇನೆ
ಭರತೇಶ್ ಮಾಜಿ ಸದಸ್ಯ ತಾಲ್ಲೂಕು ಪಂಚಾಯಿತಿ

ಉತ್ತಮ ರಾಸುಗಳಿಗೆ ಬಹುಮಾನ

ರಾಜ್ಯದ ವಿವಿಧ ಮೂಲೆಗಳಿಂದ ಜಾತ್ರೆಗೆ ದನಗಳು ಆಗಮಿಸುತ್ತಿವೆ. ಆಯ್ಕೆಯಾದ ಉತ್ತಮ ಎತ್ತುಗಳಿಗೆ ಪ್ರತಿ ವಿಭಾಗಕ್ಕೂ ಪ್ರಥಮ ಸ್ಥಾನಕ್ಕೆ ₹15000 ದಿತ್ವೀಯ ಸ್ಥಾನಕ್ಕೆ ₹9000 ತೃತೀಯ ಸ್ಥಾನಕ್ಕೆ ₹6000 ಸಾವಿರ ಬಹುಮಾನ ನೀಡಲಾಗುತ್ತಿದೆ. ಹಸುಗಳ ಪ್ರತಿ ವಿಭಾಗದಲ್ಲಿ ಪ್ರಥಮ ₹10000 ದ್ವಿತೀಯ ₹7500 ತೃತೀಯ ₹5000 ನಗದು ನೀಡಲಾಗುತ್ತಿದೆ. ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ. ಎಸ್. ನಾಗರಾಜ ಮಾತನಾಡಿ ‘ಹಸುಗಳು ನಮ್ಮ ಆರ್ಥಿಕತೆಯ ಬೆನ್ನೆಲುಬು. ದೇಸಿ ತಳಿ ರಾಸುಗಳ ರಕ್ಷಣೆ ಕೇವಲ ಉಳುಮೆ ಮಾಡಲು ಅಲ್ಲ. ಬದಲಾಗಿ ಅದೊಂದು ಸೇವೆ ಹಾಗೂ ಅದನ್ನು ಸಂರಕ್ಷಿಸುವ ಹೊಣೆ ನಮ್ಮ ಮೇಲಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.