ಮಳವಳ್ಳಿ: ತಮಿಳುನಾಡಿಗೆ ಕಾವೇರಿ ಜಲಾಶಯಗಳಿಂದ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕಳೆದ ಹಲವು ದಿನಗಳಿಂದ ಮಂಡ್ಯದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಭಾಗಿಯಾಗಲು ತಾಲ್ಲೂಕಿನ ಹಲವು ಗ್ರಾಮಗಳ ರೈತರು ನೂರಾರು ಬೈಕ್ಗಳಲ್ಲಿ ತೆರಳಿದರು.
ತಾಲ್ಲೂಕಿನ ಹಿಟ್ಟನಹಳ್ಳಿಕೊಪ್ಪಲು, ಮಿಕ್ಕೆರೆ, ಚಿಕ್ಕಮುಲಗೂಡು ಗ್ರಾಮಗಳ ನೂರಾರು ಮಂದಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಾಗೂ ಸಂಸದರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ ಬೈಕ್ ಜಾಥಾ ಮೂಲಕ ತೆರಳಿದರು.
ಕರ್ನಾಟಕ ಕನ್ನಡ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಸಿ.ಮಂಜುನಾಥ್ ಮಾತನಾಡಿ, ‘ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಧರಣಿ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದು ಸಮಸ್ಯೆ ಆಲಿಸಿದ್ದರೂ ನೀರು ನಿಲ್ಲಿಸುವ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಬರಗಾಲದಿಂದ ಬೆಳೆ ನಷ್ಟವಾಗಿದ್ದು, ಜಿಲ್ಲೆಗೆ ₹1 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.
‘ತಮಿಳುನಾಡಿಗೆ ಹರಿಯುತ್ತಿರುವ ನೀರು ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಹಿಟ್ಟನಹಳ್ಳಿಕೊಪ್ಪಲು ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಮ್ಮ, ಚಿಕ್ಕಮುಲಗೂಡು ಗ್ರಾ.ಪಂ ಅಧ್ಯಕ್ಷ ಮಾದೇಶ್, ಸದಸ್ಯರಾದ ಪ್ರದೀಪ್, ವೀರೇಶ್, ದಿಲೀಪ್, ಮಂಜು, ಆಲದಹಳ್ಳಿ ದೇವರಾಜು, ಮಹೇಶ್, ಜಗದೀಶ್, ಈರಣ್ಣ, ಶಿವಣ್ಣ, ಮಹೇಶ್, ಮಹದೇವ್, ರುದ್ರಸ್ವಾಮಿ, ಮುಖಂಡರಾದ ಪುಟ್ಟಸ್ವಾಮಿ, ಬಿ.ಆರ್.ರಾಮಚಂದ್ರಯ್ಯ, ದ್ಯಾವಣ್ಣ, ರಮೇಶ್, ಅಂದಾನಿ, ರಾಮಲಿಂಗ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.