ಶ್ರೀರಂಗಪಟ್ಟಣ: ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ಒಕ್ಕಲಿಗ ಹಿತರಕ್ಷಣಾ ಸಮಿತಿ ಸದಸ್ಯರು ಒಕ್ಕಲಿಗರಿಗೆ ನೀಡುವ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಊರಿನ ಮಾರಿಗುಡಿ ವೃತ್ತದಿಂದ ನಾಡ ಕಚೇರಿ ವರೆಗೆ ಬೈಕ್ ರ್ಯಾಲಿ ನಡೆಸಿದರು. ವಿವಿಧ ಫಲಕಗಳನ್ನು ಹಿಡಿದು ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಬಾಲಗಂಗಾಧರನಾಥ ಸ್ವಾಮೀಜಿ ಪರ ಘೋಷಣೆಗಳನ್ನು ಕೂಗಿದರು. ಪಾಲಿಟೆಕ್ನಿಕ್ ಕಾಲೇಜು ವೃತ್ತದಲ್ಲಿ ಮಾನವ ಸರಪಳಿ ರಚಿಸಿದರು. ನಾಡ ಕಚೇರಿ ಎದುರು ಕೂಡ ಕೆಲಕಾಲ ಪ್ರತಿಭಟನೆ ನಡೆಯಿತು.
ರಾಜ್ಯದಲ್ಲಿ ಸುಮಾರು ಒಂದು ಕೋಟಿ ಒಕ್ಕಲಿಗರು ಇದ್ದಾರೆ. ಸದ್ಯ ಪ್ರವರ್ಗ 3ಎಗೆ ಶೇ 4 ಮೀಸಲಾತಿ ಸೌಲಭ್ಯ ಇದೆ. ಆದರೆ ಶೇ 4ರಷ್ಟು ಮೀಸಲಾತಿ ಸೌಲಭ್ಯವನ್ನು ಒಕ್ಕಲಿಗರ ಜತೆಗೆ ರೆಡ್ಡಿ, ಬಲಿಜ, ಭಂಟ, ಕೊಡವ ಸೇರಿ 12 ಜಾತಿಗಳ ಜನರು ಹಂಚಿಕೊಳ್ಳುತ್ತಾರೆ. ಒಕ್ಕಲಿಗರ ಜನಸಂಖ್ಯೆಗೆ ಅನುಗುಣವಾಗಿ ಶೇ 10 ಮೀಸಲಾತಿ ಸೌಲಭ್ಯ ನೀಡಬೇಕು ಎಂದು ಮುಖಂಡರಾದ ಕಿಶೋರ್, ಗೌತಮ್ ಮರೀಗೌಡ ಇತರರು ಆಗ್ರಹಿಸಿದರು.
ಉಪ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಎಸ್ಡಿಎಂಸಿ ಅಧ್ಯಕ್ಷ ರವಿಕುಮಾರ್, ರಜತ್, ಶಿವರಾಜು, ದಿವಾಕರ್ (ಕಾಂಬ್ಳಿ), ಪಾಪಣ್ಣ, ಸತೀಶ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.