ADVERTISEMENT

ಕೆಆರ್‌ಎಸ್ | 20 ಕಿ.ಮೀ.ವ್ಯಾಪ್ತಿ ಕ್ರಷರ್‌ ಸ್ಥಗಿತ: ಸಚಿವ ಮಲ್ಲಿಕಾರ್ಜುನ

ಗಣಿ ಮತ್ತು ಭೂ ವಿಜ್ಞಾನ ಸಚಿವ ಉತ್ತರ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2023, 15:52 IST
Last Updated 13 ಡಿಸೆಂಬರ್ 2023, 15:52 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಪಾಂಡವಪುರ: ‘ಕೃಷ್ಣರಾಜಸಾಗರ ಅಣೆಕಟ್ಟಿನಿಂದ 20 ಕಿ.ಮೀ.ವ್ಯಾಪ್ತಿಯಲ್ಲಿ ಬರುವ 8 ಜಲ್ಲಿ ಕ್ರಷರ್‌ಗಳ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸದನಲ್ಲಿ ತಿಳಿಸಿದರು.

ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಬೆಳಗಾವಿ ಅಧಿವೇಶನದಲ್ಲಿ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ್ದಾರೆ.

ADVERTISEMENT

ಮೇಲುಕೋಟೆ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಜಲ್ಲಿ ಕ್ರಷರ್‌ಗಳ ಸಂಖ್ಯೆ ಎಷ್ಟು? ಸರ್ಕಾರಿ ಜಮೀನು ಅಥವಾ ಅರಣ್ಯ ಪ್ರದೇಶ ಒತ್ತುವರಿಕೊಂಡು ಕಾರ್ಯನಿರ್ವಹಿಸುತ್ತಿರುವ ಕ್ರಷರ್‌ಗಳ ಸಂಖ್ಯೆ, ತೆಗೆದುಕೊಂಡಿರುವ ಕ್ರಮಗಳೇನು? ಎಂದು ಪ್ರಶ್ನಿಸಿದ್ದರು.

ಇದಕ್ಕೆ ಉತ್ತರಿಸಿದ ಸಚಿವರು, ‘ಕ್ಷೇತ್ರದಲ್ಲಿ 14 ಜಲ್ಲಿ ಕ್ರಷರ್‌ ಘಟಕಗಳಿಗೆ ಲೈಸೆನ್ಸ್‌ ನೀಡಲಾಗಿದ್ದು, ಪ್ರಸ್ತುತ 6 ಕ್ರಷರ್‌ಗಳು ಕಾರ್ಯನಿರ್ವಹಿಸುತ್ತಿವೆ.ಅಣೆಕಟ್ಟೆನ ಹಿತದೃಷ್ಟಿಯಿಂದ 8 ಕ್ರಷರ್‌ಗಳನ್ನು ಸ್ಘಗಿತಗೊಳಿಸಲಾಗಿದೆ. ಸರ್ಕಾರಿ ಜಮೀನು ಅಥವಾ ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಯಾವುದೇ ಕ್ರಷರ್‌ ಘಟಕಗಳು ಇಲ್ಲ’ ಎಂದು ಹೇಳಿದ್ದಾರೆ.

8 ಘಟಕ ಸ್ಥಗಿತ: ‘ಬೇಬಿಬೆಟ್ಟದಲ್ಲಿ ನಡೆಯುತ್ತಿದ್ದ ಎಸ್‌ಟಿಜಿ ಗ್ರೂಪ್‌ನ 2 ಸ್ಟೋನ್ ಕ್ರಷರ್‌, ಸಿದ್ದೇಶ್ವರ ಸ್ಟೋನ್ ಕ್ರಷರ್, ಲಕ್ಷ್ಮಿ ವೆಂಕಟೇಶ್ವರ ಸ್ಟೋನ್ ಕ್ರಷರ್, ಚಲುವರಾಯಸ್ವಾಮಿ ಸ್ಟೋನ್ ಕ್ರಷರ್, ಹೊನಗಾನಹಳ್ಳಿ ಪ್ರದೇಶದಲ್ಲಿದ್ದ ಮನು ಸ್ಟೋನ್ ಕ್ರಷರ್, ಶ್ರೀ ರಾಮಾಂಜನೇಯ ಸ್ಟೋನ್ ಕ್ರಷರ್, ಶ್ರೀ ಧನಲಕ್ಷ್ಮಿ ಸ್ಟೋನ್ ಕ್ರಷರ್‌ಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು.

‘ಅಲ್ಪಹಳ್ಳಿ ವ್ಯಾಪ್ತಿಯಲ್ಲಿನ ಪ್ರಭಾವತಿ ಸ್ಟೋನ್ ಕ್ರಷರ್. ಕಂಚನಹಳ್ಳಿ ವ್ಯಾಪ್ತಿಯಲ್ಲಿನ ಹಿರಿದೇವಮ್ಮ ಸ್ಟೋನ್ ಕ್ರಷರ್, ನರಹಳ್ಳಿ ವ್ಯಾಪ್ತಿಯಲ್ಲಿನ ಭೈರವೇಶ್ವರ ಸ್ಟೋನ್ ಕ್ರಷರ್, ಶಂಭೂನಹಳ್ಳಿ ವ್ಯಾಪ್ತಿಯಲ್ಲಿನ ಪದ್ಮಜಾ ಸ್ಟೋನ್‌ ಕ್ರಷರ್ ಹಾಗೂ ಕನಗನಮರಡಿ ವ್ಯಾಪ್ತಿಯಲ್ಲಿನ ಮಂಜುನಾಥ ಸ್ಟೋನ್ ಕ್ರಷರ್ ಮತ್ತು ಮಂಚಮ್ಮದೇವಿ ಸ್ಸೋನ್ ಕ್ರಷರ್ ಕಾರ್ಯನಿರ್ವಹಿಸುತ್ತಿವೆ’ ಎಂದು ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.