ಶ್ರೀರಂಗಪಟ್ಟಣ: ತಾಲ್ಲೂಕಿನ ದೊಡ್ಡೇಗೌಡನಕೊಪ್ಪಲು ಸಮೀಪದ ಗೌತಮ ಕ್ಷೇತ್ರದ ಬಳಿ, ಕಾವೇರಿ ನದಿ ದಡದಲ್ಲಿ ಸೋಮವಾರ ನಡೆಯುತ್ತಿದ್ದ ಕೋಳಿ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿರುವ ಪಟ್ಟಣ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಟೌನ್ ಪೊಲೀಸ್ ಠಾಣೆಯ ಸಿಪಿಐ ಬಿ.ಜಿ. ಕುಮಾರ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದ್ದು, ಮೂವರನ್ನು ಬಂಧಿಸಿದೆ. ಕೋಳಿ ಜೂಜಿನಲ್ಲಿ ತೊಡಗಿದ್ದ ಪ್ರದೀಪ್, ಜಯಂತ್ ಮತ್ತು ಉಲ್ಲಾಸ್ ಎಂಬವರನ್ನು ವಶಕ್ಕೆ ಪಡೆಯಲಾಗಿದ್ದು, ಇತರ 10 ಮಂದಿ ನದಿ ದಾಟಿ ಪರಾರಿಯಾಗಿದ್ದಾರೆ. ಆರೋಪಿಗಳಿಗೆ ಸೇರಿದ ಒಂದು ಕಾರು, ಒಂದು ಆಟೊ ಮತ್ತು 12 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿ.ಜಿ. ಕುಮಾರ್ ತಿಳಿಸಿದ್ದಾರೆ.
ಜೂಜಿನಲ್ಲಿ ಪಣಕ್ಕಿಟ್ಟಿದ್ದ ₹7,600 ನಗದು ಹಾಗೂ ಜೂಜಿಗೆ ಬಳಸುತ್ತಿದ್ದ ಎರಡು ಕೋಳಿಗಳನ್ನು ವಶಪಡಿಸಕೊಳ್ಳಲಾಗಿದೆ. ಪಾಂಡವಪುರದ ಕುಮಾರ್ ಎಂಬವರು ಈ ಕೋಳಿ ಜೂಜು ಆಯೋಜಿಸಿದ್ದರು ಎಂದು ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಪಿಎಸ್ಐ ಗಂಗಾಧರ್, ಮಹಿಳಾ ಪಿಎಸ್ಐ ಜಾನಾಬಾಯಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.