ADVERTISEMENT

ಸಮನ್ವಯಾಧಿಕಾರಿಗಳ ಕಾರ್ಯ ಶ್ಲಾಘನೀಯ: ಮರಿತಿಬ್ಬೇಗೌಡ ಅಭಿಮತ

ಶೈಕ್ಷಣಿಕ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 3:03 IST
Last Updated 21 ಫೆಬ್ರುವರಿ 2022, 3:03 IST
ಮಂಡ್ಯ ನಗರದ ಕೆವಿಎಸ್‌ ಭವನದಲ್ಲಿ ಕರ್ನಾಟಕ ರಾಜ್ಯದ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಿಗೆ ಆಯೋಜಿಸಿದ್ದ ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು. ಮರಿತಿಬ್ಬೇಗೌಡ, ಎಂ.ಶ್ರೀನಿವಾಸ್, ಪ್ರೊ.ಜಯಪ್ರಕಾಶಗೌಡ ಇದ್ದರು
ಮಂಡ್ಯ ನಗರದ ಕೆವಿಎಸ್‌ ಭವನದಲ್ಲಿ ಕರ್ನಾಟಕ ರಾಜ್ಯದ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಿಗೆ ಆಯೋಜಿಸಿದ್ದ ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು. ಮರಿತಿಬ್ಬೇಗೌಡ, ಎಂ.ಶ್ರೀನಿವಾಸ್, ಪ್ರೊ.ಜಯಪ್ರಕಾಶಗೌಡ ಇದ್ದರು   

ಮಂಡ್ಯ: ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಚೈತನ್ಯ ಹಾಗೂ ಆತ್ಮವಿಶ್ವಾಸ ತುಂಬಲು ಸಮನ್ವಯಾಧಿಕಾರಿಗಳು ಶಾಲಾ ಶಿಕ್ಷಕರಿಗೆ ತರಬೇತಿ ನೀಡಲು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಹೇಳಿದರು.

ನಗರದ ಕರ್ನಾಟಕ ಸಂಘದ ಕೆವಿಎಸ್‌ ಭವನದಲ್ಲಿ ಕರ್ನಾಟಕ ರಾಜ್ಯದ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಿಗೆ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಹೊಸ ಆಯಾಮಗಳಲ್ಲಿ ಶಿಕ್ಷಕರನ್ನು ಅಣಿಗೊಳಿಸಿ ಆ ಮೂಲಕ ವಿದ್ಯಾರ್ಥಿಗಳನ್ನು ಸಿದ್ಧ ಮಾಡುವುದು ಪ್ರಮುಖ ಕಾರ್ಯ. ಆದರೂ ನಿಮ್ಮ ಇಲಾಖೆಯ ಅಧಿಕಾರಿಗಳೇ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದು, ನಿಮ್ಮ ಕೆಲಸಗಳನ್ನು ಶ್ಲಾಘಿಸಿಲ್ಲ ಎಂದು ದೂರಿದರು. ಸಮನ್ವಯಾಧಿಕಾರಿಗಳ ಕಷ್ಟವನ್ನು ಸಚಿವರೂ ಕೇಳುತ್ತಿಲ್ಲ ಎಂದರು.

ADVERTISEMENT

ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಸಮನ್ವಯಾಧಿಕಾರಿಗಳ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆದು ಬಗೆಹರಿಸಲು ಒತ್ತಾಯಿಸಲಾಗುವುದು ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ಪ್ರಸ್ತುತ ವಿದ್ಯಾರ್ಥಿಗಳ ನಡೆ, ನಡಿ ತಪ್ಪುತ್ತಿರುವುದು ದುರಂತ. ಅವರಿಗೆ ಮೌಲ್ಯಯುತ ಶಿಕ್ಷಣ ನೀಡುವ ಮನೋಭಾವ ಮುಖ್ಯವಾಗಬೇಕು. ತರಗತಿ ಕೋಣೆಯಲ್ಲಿ ವರ್ತನೆ ಸರಿಯಿದ್ದರೆ ಸಾಲದು, ಅದರಾಚೆಗೂ ವರ್ತನೆ ಬದಲಿಸದೆ ಇರುವಂತೆ ಶಿಕ್ಷಣ ನೀಡುವಂತಾಗಬೇಕು. ಪ್ರಾಥಮಿಕ ಶಿಕ್ಷಣದ ಶಿಕ್ಷಕರು ಕೆಳ ಹಂತದಲ್ಲಿಯೇ ವಿದ್ಯಾರ್ಥಿಗಳನ್ನು ಅಣಿಮಾಡಬೇಕು. ಇದರಲ್ಲಿ ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರ ಸಂಪನ್ಮೂಲ ಕೇಂದ್ರಗಳ ಸವಾಲುಗಳು ಮತ್ತು ಬಲವರ್ಧನೆ ಬಗ್ಗೆಹಾವೇರಿ ತಾಲ್ಲೂಕಿನ ಹಾನಗಲ್‌ ಕ್ಷೇತ್ರ ಸಮನ್ವಯಾಧಿಕಾರಿ ಡಾ.ಬೇವಿನಮರ ಹಾನಗಲ್‌ ಹಾಗೂ ಪಂಚಾಯತ್‌ ಪಬ್ಲಿಕ್ ಶಾಲೆ ವಿಷಯ ಕುರಿತು ಕ್ಷೇತ್ರ ಸಮನ್ವಯಾಧಿಕಾರಿ (ಉತ್ತರವಲಯ) ನಾಗರಾಜು ವಿಷಯ ಮಂಡಿಸಿದರು.

ವಿಸ್ತೃತ ಚರ್ಚೆ ನಡೆಸಿ ಸಭೆಯಲ್ಲಿ ಪ್ರಸ್ತಾಪವಾದ ವಿಷಯಗಳನ್ನು ಇಲಾಖೆಗೆ ವರದಿ ಸಲ್ಲಿಸಲು ತೀರ್ಮಾನಿಸಲಾಯಿತು.

ಕಾರ್ಯಾಗಾರಕ್ಕೆರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು, ರಾಜ್ಯದ ಬಿಆರ್‌ಸಿಗಳು ಮಾಡಿರುವ ಕೆಲಸವನ್ನು ವಾಲ್‌ಸ್ಲೇಟ್‌ಗಳಲ್ಲಿ ಪ್ರದರ್ಶನಕ್ಕಿಡಲಾಗಿತ್ತು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.