ಮಂಡ್ಯ: ಸಾಮಾನ್ಯ ಜ್ವರ ಬಂದರೆ ತಡೆಯಲು ಕಷ್ಟವಾಗುತ್ತದೆ, ಐದಾರು ದಿನ ಮಾತ್ರೆ ತೆಗೆದುಕೊಳ್ಳಬೇಕು, ಚುಚ್ಚುಮದ್ದು ಹಾಕಿಸಿಕೊಳ್ಳಬೇಕು. ಆದರೆ ಕೋವಿಡ್–19 ಹಾಗಲ್ಲ, ಯಾವ ಮಾತ್ರೆ, ಇಂಜೆಕ್ಷನ್ ಕೂಡ ಬೇಕಾಗಿಲ್ಲ. ಕೇವಲ ಎಂಟು ದಿನಗಳಲ್ಲಿ ಕೋವಿಡ್ ಹೆದರಿ ಓಡಿ ಹೋಗುತ್ತದೆ. ಭಯಪಡದೆ ಧೈರ್ಯದಿಂದಿರಬೇಕು ಅಷ್ಟೆ.
ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಕೊರೊನಾ ಸೋಂಕಿನ ಬಗ್ಗೆ ಏನೇನೋ ಸುಳ್ಳು ಸುದ್ದಿಗಳು ಬರುತ್ತಿವೆ. ಆದರೆ ಅವುಗಳು ನಿಜವಲ್ಲ, ಕೋವಿಡ್ ಅನುಭವಿಸಿದವರಿಗೆ ಇದು ತಿಳಿಯುತ್ತದೆ. ಟೈಫೈಡ್ ಜ್ವರ ಬಂದರೆ ತಿಂಗಳಗಟ್ಟಲೆ ಕಾಡುತ್ತದೆ. ಆದರೆ ಈ ಕೋವಿಡ್ ಕಾಯಿಲೆ ಬಲುಬೇಗ ವಾಸಿಯಾಗುತ್ತದೆ.
ನನಗೆ ಎಲ್ಲಿಂದ ಕೋವಿಡ್ ಬಂತು ಎಂಬುದು ಗೊತ್ತಿಲ್ಲ. ಪಾಸಿಟಿವ್ ಬಂದಿದೆ ಎಂದು ಗೊತ್ತಾದಾಗ ನನಗೂ ಭಯವಾಗಿತ್ತು. ಆದರೆ ನಮ್ಮ ವಾರ್ಡ್ನಲ್ಲಿ ಇದ್ದ 2 ವರ್ಷದ ಮಗುವನ್ನು ನೋಡಿ ಧೈರ್ಯ ತಂದುಕೊಂಡೆ. 2 ವರ್ಷದ ಮಗುವಿನಿಂದ 70 ವರ್ಷದ ವೃದ್ಧರವರೆಗೂ ನಮ್ಮ ವಾರ್ಡ್ನಲ್ಲಿ ಇದ್ದರು. ಈ ಕೋವಿಡ್ನಿಂದ ಯಾರಿಗೂ ತೊಂದರೆಯಾಗಲಿಲ್ಲ. ಎಲ್ಲರೂ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಮಾಧ್ಯಮಗಳಲ್ಲಿ ನಾನೂ ನೋಡಿದ್ದೇನೆ. ಬೇರೆ ಬೇರೆ ಜಿಲ್ಲೆಗಳಲ್ಲಿ ರೋಗಿಗಳಿಗೆ ಸೌಲಭ್ಯ ಇಲ್ಲ ಎಂದು ತೋರಿಸುತ್ತಾರೆ. ಆದರೆ ಮಂಡ್ಯ ಕೋವಿಡ್ ಆಸ್ಪತ್ರೆಯಲ್ಲಿ ಆ ರೀತಿಯ ಯಾವುದೇ ತೊಂದರೆ ಆಗಲಿಲ್ಲ. ಮಂಡ್ಯದಲ್ಲಿ ದೊರೆಯುತ್ತಿರುವ ಚಿಕಿತ್ಸೆ ಬೇರೆ ಯಾವ ಜಿಲ್ಲೆಯಲ್ಲಿಯೂ ದೊರೆಯುತ್ತಿಲ್ಲ ಎನಿಸಿತು.
ಪ್ರತಿ ಆರ್ಧಗಂಟೆಗೊಮ್ಮೆ ಬಿಸಿನೀರು ಕೊಡುತ್ತಿದ್ದರು. ವೈದ್ಯರು, ನರ್ಸ್ಗಳು ಪ್ರಿತಿಯಿಂದ ನೋಡಿಕೊಳ್ಳುತ್ತಿದ್ದರು. ಮನೆಗಿಂತ ಚೆನ್ನಾಗಿ ಕಾಳಜಿ ಮಾಡಿದರು. ಯಾರಿಗೇ ಕಾಯಿಲೆ ಬಂದರೂ ಹೆದರಬೇಕಾಗಿಲ್ಲ. ಚೆನ್ನಾಗಿ ಊಟ ಮಾಡಿಕೊಂಡು ಇದ್ದರೂ ಈ ಕಾಯಿಲೆ ಮಾಯವಾಗುತ್ತದೆ.
–ಎಚ್.ಎನ್.ಪಾರ್ಥ, ಹಿರೇಮರಳಿ, ಪಾಂಡವಪುರ ತಾಲ್ಲೂಕು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.