ಮಂಡ್ಯ: ‘ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಸೂಚನೆಯಂತೆ ನಾನೂ 14 ದಿನ ಹೋಂ ಕ್ವಾರಂಟೈನ್ನಲ್ಲಿ ಇದ್ದೆ. ಹೀಗಾಗಿ ಜಿಲ್ಲೆಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ’ ಎಂದು ಸಂಸದೆ ಸುಮಲತಾ ಗುರುವಾರ ತಿಳಿಸಿದರು.
‘ಪ್ರವಾಸೋದ್ಯಮ ಇಲಾಖೆಯ ಸಮಿತಿಯಲ್ಲಿ ನಾನೂ ಸದಸ್ಯೆಯಾಗಿದ್ದೇನೆ. ಮಾರ್ಚ್ 20ರಂದು ದೆಹಲಿಯಲ್ಲಿ ಸಮಿತಿಯ ಸಭೆ ನಡೆಯಿತು. ಸಭೆಯಲ್ಲಿ ಬಿಜೆಪಿ ನಾಯಕಿ ವಸುಂಧರಾ ರಾಜೇ ಅರಸ್ ಪುತ್ರ ದುಶ್ಯಂತ್ ಸಿಂಗ್ ಭಾಗವಹಿಸಿದ್ದರು. ಅವರು ಗಾಯಕಿ, ಕೋವಿಡ್– 19 ದೃಢಪಟ್ಟಿದ್ದ ಕನ್ನಿಕಾ ಕಪೂರ್ ಪಾರ್ಟಿಗೂ ಹೋಗಿ ಬಂದಿರುವ ವಿಷಯ ಬೆಳಕಿಗೆ ಬಂತು. ಹೀಗಾಗಿ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರಿರೂ ಕ್ವಾರಂಟೈನ್ನಲ್ಲಿ ಇರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದರು’ ಎಂದರು.
‘ನಂತರ ದುಶ್ಯಂತ್ ಸಿಂಗ್ ಅವರ ಕೋವಿಡ್–19 ಪರೀಕ್ಷಾ ವರದಿ ನೆಗೆಟಿವ್ ಬಂತು. ಆದರೂ ನಾನು 14 ದಿನ ಮನೆ ಬಿಟ್ಟು ಹೊರಗೆ ಬರಲಿಲ್ಲ. ನನ್ನ ಮಗ ಅಭಿಷೇಕ್ನಿಂದಲೂ ದೂರ ಉಳಿದಿದ್ದೆ, ಆತ ಜೆ.ಪಿ ನಗರದ ಮನೆಯಲ್ಲಿದ್ದರೆ ನಾನು ವಸಂತ ನಗರದ ಅಪಾರ್ಟ್ಮೆಂಟ್ನಲ್ಲಿ ಇದ್ದೆ’ ಎಂದು ಹೇಳಿದರು.
‘ನಾನು ಮಂಡ್ಯಕ್ಕೆ ಬರುತ್ತಿಲ್ಲ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದರು. ಆದರೆ, ನಾನು 14 ದಿನಗಳ ಕಾಲ ಪ್ರತಿನಿತ್ಯ ಜಿಲ್ಲಾಧಿಕಾರಿಗಳ ಸಂಪರ್ಕದಲ್ಲಿ ಇದ್ದೆ. ಜಿಲ್ಲೆಯ ಸಂಪೂರ್ಣ ವರದಿ ಪಡೆಯುತ್ತಿದ್ದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.