ADVERTISEMENT

ಕರ್ಫ್ಯೂ; ಎರಡನೇ ದಿನವೂ ಉತ್ತಮ ಸ್ಪಂದನೆ

ಅನವಶ್ಯಕವಾಗಿ ವಾಹನ ಸಂಚಾರ; ದಂಡ ವಿಧಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 16:28 IST
Last Updated 9 ಜನವರಿ 2022, 16:28 IST
ಮಂಡ್ಯ ನಗರದಲ್ಲಿ ಅನಾವಶ್ಯಕವಾಗಿ ಓಡಾಟ ನಡೆಸಿದ ವಾಹನ ಸವಾರರನ್ನು ಪೊಲೀಸರು ತಪಾಸಣೆ ಮಾಡಿದರು
ಮಂಡ್ಯ ನಗರದಲ್ಲಿ ಅನಾವಶ್ಯಕವಾಗಿ ಓಡಾಟ ನಡೆಸಿದ ವಾಹನ ಸವಾರರನ್ನು ಪೊಲೀಸರು ತಪಾಸಣೆ ಮಾಡಿದರು   

ಮಂಡ್ಯ: ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಅನವಶ್ಯಕವಾಗಿ ಓಡಾಡುತ್ತಿದ್ದ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸಿದರು.

ವೀಕೆಂಡ್‌ ಕರ್ಫ್ಯೂನಲ್ಲಿ ಅಗತ್ಯ ವಸ್ತುಗಳಾದ ಹಾಲು, ತರಕಾರಿ, ದಿನಸಿ ಪದಾರ್ಥಗಳು, ಔಷಧಿ ಅಂಗಡಿಗಳು ಎಂದಿನಂತೆ ತೆರೆದಿತ್ತು. ಕೋವಿಡ್‌ ನಿಯಮ ಪಾಲಿಸದೆ ಹಲವು ಮಂದಿ ಖರೀದಿಯಲ್ಲಿ ತೊಡಗಿದ್ದರು. ಮಾಂಸ ಪ್ರಿಯರು ಮಾಂಸದಂಗಡಿಯಲ್ಲಿ ಖರೀದಿ ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದರು.

ಬಟ್ಟೆ, ಎಲೆಕ್ಟ್ರಿಕಲ್‌, ಕಬ್ಬಿಣ, ಜ್ಯುವೆಲರಿ ಶಾಪ್‌ಗಳು ಮುಚ್ಚಿದ ರೀತಿಯಲ್ಲೇ ಎರಡನೇ ದಿನವಾದ ಭಾನುವಾರವೂ ಮುಂದುವರಿಯಿತು. ಇದರಿಂದ ಗೃಹ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದವರು ಎರಡು ದಿನ ಮುಂದೂಡುವಂತಾಗಿತ್ತು. ಮಧ್ಯಾಹ್ನದ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಕೆಲವರು ಎಳನೀರು ಅಂಗಡಿ ಬಳಿ ತೆರಳಿ ದಣಿವಾರಿಸಿಕೊಂಡರು. ರೋಗಿಗಳ ಸಂಬಂಧಿಕರೂ ಎಳನೀರು ಪಾರ್ಸೆಲ್‌ ತೆಗೆದುಕೊಂಡು ಹೋಗುತ್ತಿದ್ದರು.

ADVERTISEMENT

ಇನ್ನು ಕೆಲವರು ನಂದಿನಿ ಪಾರ್ಲರ್‌ಗೆ ತೆರಳಿ ಮಜ್ಜಿಗೆ ಕುಡಿದು ದಣಿವಾರಿಸಿಕೊಂಡರು. ಪ್ರಯಾಣಿಕರಿಗೆ ಅನುಗುಣವಾಗಿ ಬಸ್‌ ಸಂಚಾರ ಇತ್ತು. ತುರ್ತು ಕೆಲಸಕ್ಕೆಂದು ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಬಂದಿದ್ದವರು ಬಸ್‌ಗಳಿಲ್ಲದೆ ಪ್ರಯಾಸ ಪಡುವಂತಾಯಿತು. ಜನಜಂಗುಳಿಯಿಂದ ತುಂಬಿರುತ್ತಿದ್ದ ಬಸ್‌ ನಿಲ್ದಾಣಗಳು ಕೆಲವು ಕಡೆ ಬಿಕೋ ಎನಿಸಿದ್ದವು. ಕೆಲವು ಕಡೆ ಬೆರಳೆಣಿಕೆಯಷ್ಟು ಪ್ರಯಾಣಿಕರಿದ್ದರು.

ಬಸ್‌ ನಿಲ್ದಾಣಗಳಲ್ಲಿ ಚಾಲಕರು ಮತ್ತು ನಿರ್ವಾಹಕರು ಮರಗಳ ನೆರಳಲ್ಲಿ ಹಾಗೂ ಶೆಟರ್‌ ಕೆಳಗಡೆ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಪ್ರಮುಖ ಸ್ಥಳಗಳಲ್ಲಿ ಪೊಲೀಸರು ವಾಹನ ತಪಾಸಣೆಯಲ್ಲಿ ನಿರತರಾಗಿದ್ದರು. ಅನಾವಶ್ಯಕವಾಗಿ ಬಂದ ಸವಾರರಿಗೆ ದಂಡ ವಿಧಿಸಿದರು. ಸಕಾರಣ ಕೊಟ್ಟ ಸವಾರರನ್ನು ಕಳುಹಿಸಿಕೊಡಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.