ಭಾರತೀನಗರ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಮೇಲ್ವರ್ಗದ ದೇವಾಲಯಗಳಿಗೆ ಪ್ರವೇಶಿಸಿದ ಪರಿಶಿಷ್ಟ ಜನರು ಪೂಜೆ ಸಲ್ಲಿಸಿದರು.
ಭಾರತೀನಗರ: ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಪೊಲೀಸರ ಭದ್ರತೆಯೊಂದಿಗೆ ಗ್ರಾಮದ ಪರಿಶಿಷ್ಟ ಜನಾಂಗದ ಮಹಿಳೆಯರು, ಪುರುಷರು ದೇವಾಲಯಗಳಿಗೆ ಪ್ರವೇಶಿಸಿದರು.
ಗ್ರಾಮದಲ್ಲಿ ಕಳೆದ ಡಿ.15 ರಂದು ಅಂಬೇಡ್ಕರ್ ಪುತ್ಥಳಿ ನಿರ್ಮಾಣದ ಸ್ಥಳಕ್ಕೆ ಸಂಬಂಧಿಸಿದಂತೆ ಅಂಬೇಡ್ಕರ್ ಪ್ಲೆಕ್ಸ್ ಹರಿದ ಘಟನೆಗೆ ಸಂಬಂಧಿಸಿದಂತೆ ಪರಿಶಿಷ್ಟರು, ಇತರೆ ಜನಾಂಗದ ನಡುವೆ ಘರ್ಷಣೆಯಾಗಿತ್ತು. ಇದಾದ ನಂತರ ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು ಪೊಲೀಸ್ ಇಲಾಖೆ ಡಿವೈಎಸ್ಪಿ ಯಶವಂತ್ಕುಮಾರ್, ಸಿಪಿಐ ಅನಿಲ್ ಅನಿಲ್ ಅವರ ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ಪಡೆ ನಿಯೋಜನೆಗೊಳಿಸಲಾಗಿತ್ತು.
ಈ ನಡುವೆ ಮದ್ದೂರಿನ ತಾಲ್ಲೂಕು ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಸಮ್ಮುಖದಲ್ಲಿ ಎರಡೂ ಗುಂಪುಗಳ ಶಾಂತಿ ಸಭೆ ನಡೆಸಲಾಗಿತ್ತು. ಇಲ್ಲಿ ಪರಿಶಿಷ್ಟ ಜಾನಾಂಗದವರು ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಸ್ಥಳ ಕೊಡಿಸುವಂತೆ, ಬೊಮ್ಮಲಿಂಗೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಶುಭ ಸಮಾರಂಭಗಳಿಗೆ ಅವಕಾಶ ಕೊಡಿಸುವಂತೆ ಮತ್ತು ಟ್ರಸ್ಟ್ನಲ್ಲಿ ಸದಸ್ಯತ್ವ ನೀಡುವಂತೆ, ಮೇಲ್ವರ್ಗದವರ ದೇವಾಲಗಳಿಗೆ ಪ್ರವೇಶ ಕೊಡಿಸುವಂತೆ ಮನವಿ ಮಾಡಿದ್ದರು.
ಶಾಂತಿ ಸಭೆಯಲ್ಲಿ ಮಾಡಿದ್ದ ಮನವಿ ಮೇರೆಗೆ ದಿನಾಂಕ ನಿಗದಿಗೊಳಿಸಿದ್ದು, ಅದರಂತೆ ಸೋಮವಾರ ಪೊಲೀಸ್ ಭದ್ರತೆಯಲ್ಲಿ ಬೊಮ್ಮಲಿಂಗೇಶ್ವರಸ್ವಾಮಿ ದೇವಾಲಯ, ಚಾಮುಂಡೇಶ್ವರಿ, ಮಾರಮ್ಮ, ಕಾಲಭೈರವ, ತಿಮ್ಮಪ್ಪ ದೇವಾಲಯಗಳಿಗೆ ದಲಿತ ಮುಖಂಡ ಸಿ.ಎ.ಕೆರೆ ಮೂರ್ತಿ ನೇತೃತ್ವದಲ್ಲಿ ಪರಿಶಿಷ್ಟ ಜನರು ಪ್ರವೇಶಿಸಿದರು.
ಕೆ.ಎಂ.ದೊಡ್ಡಿ ಠಾಣಾ ಸಿಪಿಐ ಅನಿಲ್ ಅವರ ನೇತೃತ್ವದಲ್ಲಿ ಕಳೆದ ಒಂದು ವಾರದಿಂದ ಗ್ರಾಮದಲ್ಲಿ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಸೋಮವಾರವೂ ಅನಿಲ್ ಅವರು ಸ್ಥಳದಲ್ಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ರವಿ, ಮೂರ್ತಿ, ಹನುಮಯ್ಯ, ಶಿವನಂಜಪ್ಪ, ವಸಂತ್ ಕುಮಾರ್, ಮಲ್ಲಯ್ಯ, ಬೊಮ್ಮಲಿಂಗಯ್ಯ ಹಾಗೂ ಪರಿಶಿಷ್ಟ ಮುಖಂಡರು ಇದ್ದರು.
ದಲಿತ ಮುಖಂಡ ಸಿ.ಎ.ಕೆರೆ ಮೂರ್ತಿ ಮಾತನಾಡಿ, ‘ನಮ್ಮ ಜನಾಂಗದ ಮುಖಂಡರು 5 ಬೇಡಿಕೆಗಳನ್ನು ಶಾಂತಿ ಸಭೆಯಲ್ಲಿ ಮಂಡಿಸಿದ್ದು, ಅದರಲ್ಲಿ ಇಂದು ದೇವಾಲಯ ಪ್ರವೇಶಕ್ಕೆ ದಿನಾಂಕ ನಿಗದಿಗೊಳಿಸಲಾಗಿತ್ತು. ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಹಕಾರದೊಂದಿಗೆ 5 ದೇವಾಲಯಗಳಿಗೆ ಪ್ರವೇಶಿಸಲಾಯಿತು. ಮುಂದಿನ ದಿನಗಳಲ್ಲಿ ಉಳಿದ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಜಿಲ್ಲಾಡಳಿತ, ತಾಲ್ಲೂಕು ಆಡಳಿತ ನೀಡಿದ್ದು, ಅಲ್ಲಿಯವರೆಗೆ ಶಾಮತಿಯಿಂದ ವರ್ತಿಸುವಂತೆ ನಮ್ಮ ಮುಖಂಡರಿಗೆ, ಜನರಿಗೆ ತಿಳಿಸಿದ್ದೇವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.