ADVERTISEMENT

ಮಲಗಿದ್ದ ಸ್ಥಿತಿಯಲ್ಲೇ ಇಬ್ಬರ ಸಾವು

ಮಳವಳ್ಳಿ ತಾಲ್ಲೂಕಿನ ಕೊಡಗಹಳ್ಳಿ ಬಳಿ ತೋಟದ ಮನೆಯಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 11:46 IST
Last Updated 30 ನವೆಂಬರ್ 2019, 11:46 IST

ಮಳವಳ್ಳಿ: ತಾಲ್ಲೂಕಿನ ಕೊಡಗಹಳ್ಳಿ ಬಳಿ ತೋಟದ ಮನೆಯಲ್ಲಿ ರಾತ್ರಿ ಊಟ ಮಾಡಿ ಮಲಗಿದ್ದ ಕಾರ್ಮಿಕರ ಪೈಕಿ ಇಬ್ಬರು ಮಲಗಿದ ಸ್ಥಿತಿಯಲ್ಲೇ ಮೃತಪಟ್ಟಿದ್ದು, ಒಬ್ಬರು ಅಸ್ವಸ್ಥಗೊಂಡಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಬೈರನಹಳ್ಳಿ ಗ್ರಾಮದ ಶ್ರೀನಿವಾಸ್ (35), ಬೋಡಪ್ಪ (58) ಮೃತರು. ಒಡಿಶಾದ ರಾಜು ಅಸ್ವಸ್ಥಗೊಂಡಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಡುಕುತೊರೆ ರಸ್ತೆಯಲ್ಲಿ ಕೋಲಾರದ ರಾಜೇಶ್ ಎಂಬುವರು ತೋಟ ಮಾಡಿಕೊಂಡಿದ್ದು, ಇಲ್ಲಿ ಮಾಲೂರು, ಒಡಿಶಾ ಮತ್ತು ಕೋಲ್ಕತ್ತದ 10 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಗುರುವಾರ ರಾತ್ರಿ ಅಡುಗೆ ಮಾಡಿ ಹತ್ತು ಮಂದಿಯೂ ಊಟ ತಿಂದಿದ್ದು, ಈ ಮೂವರೂ ಒಂದು ಕೊಠಡಿಯಲ್ಲಿ ಮಲಗಿದ್ದಾರೆ. ನಾಲ್ವರು ಮತ್ತೊಂದು ಕೊಠಡಿಯಲ್ಲಿ, ಮೂವರು ವರಾಂಡದಲ್ಲಿ ಮಲಗಿದ್ದಾರೆ.

ADVERTISEMENT

ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ಹೊರಡಲು ಏಳು ಮಂದಿ ಸಿದ್ಧವಾಗಿದ್ದಾರೆ. ಆದರೆ, ಈ ಮೂವರು ಎಚ್ಚರಗೊಳ್ಳದ ಕಾರಣ, ಕೊಠಡಿಗೆ ಹೋಗಿ ನೋಡಿದಾಗ ಇಬ್ಬರು ಮಲಗಿದ್ದ ಸ್ಥಿತಿಯಲ್ಲೇ ಅಸುನೀಗಿರುವುದು ಗೊತ್ತಾಗಿದೆ. ಕೂಡಲೇ, ಪೊಲೀಸರಿಗೆ ಹಾಗೂ ಜಮೀನು ಮಾಲೀಕರಿಗೆ ಮಾಹಿತಿ ತಿಳಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಡಿವೈಎಸ್ಪಿ ಎಂ.ಜೆ.ಪೃಥ್ವಿ, ಸಿಪಿಐ ಧರ್ಮೇಂದ್ರ, ಪಿಎಸ್ಐ ಉಮಾವತಿ ನಾಯಕ್ ಭೇಟಿ ನೀಡಿ ಪರಿಶೀಲಿಸಿದರು. ಶವಗಳನ್ನು ಮಂಡ್ಯ ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ. ‌ಬೆಳಕವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.