ಕೆ.ಆರ್.ಪೇಟೆ: ಜೈ ಮಹಾರಾಷ್ಟ್ರ, ಜೈ ಶಿವಾಜಿ ಎಂದು ಘೋಷಣೆ ಕೂಗಿದ್ದ ಪೌರಾಡಳಿತ ಸಚಿವ ನಾರಾಯಣಗೌಡ ರಾಜೀನಾಮೆ ನೀಡಬೇಕು ಎಂದು ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕದ ಸದಸ್ಯರು ಹಾಗೂ ವಕೀಲರ ಸಂಘದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿಮಂದಿರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಜಯ ಕರ್ನಾಟಕ ಸಂಘಟನೆಯ ಸದಸ್ಯರು, ನಾರಾಯಣಗೌಡರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಹುಟ್ಟಿದ್ದ ನಾರಾಯಣಗೌಡ ಮುಂಬೈಗೆ ಹೋಗಿದ್ದರು. ನಂತರ, ವಾಪಸ್ ಆಗಿ ಶಾಸಕರಾಗಿ, ಸಚಿವರಾಗಿದ್ದಾರೆ. ಕನ್ನಡ ನಾಡು, ನುಡಿ, ನೆಲ-ಜಲದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳದೇ, ಮಹಾರಾಷ್ಟ್ರಕ್ಕೆ ಜೈ, ಮರಾಠಿಗರಿಗೆ ಜೈ ಎಂದು ಘೋಷಣೆ ಕೂಗುವ ಮೂಲಕ ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆ. ನಾರಾಯಣಗೌಡರು ಶಾಸಕರಾಗಲು, ಸಚಿವರಾಗಲು ಅನರ್ಹರು ಎಂದು ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್.ಕುಮಾರ್ ದೂರಿದರು.
ಸಂಘಟನೆಯ ಬಾವಾಜಿ ಚಂದ್ರು, ಮಹೇಶ್, ಮದನ್ ಗೌಡ, ವಿ.ಲೋಕೇಶ್, ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಮಧು, ಜಯಲಕ್ಷ್ಮೀ, ರಾಧಾ, ಗೌರಮ್ಮ, ರಾಜಮ್ಮ ಇದ್ದರು.
ಕಲಾಪದಿಂದ ಹೊರಗುಳಿದ ವಕೀಲರು: ವಕೀಲರ ಸಂಘದ ಸದಸ್ಯರು ಕಲಾಪ ದಿಂದ ಹೊರಗುಳಿಯುವ ಮೂಲಕ ಪ್ರತಿಭಟನೆ ನಡೆಸಿದರು.
ಜವಾಬ್ದಾರಿಯುತ ಸ್ಥಾನದಲ್ಲಿರುವ ನಾರಾಯಣಗೌಡರು ಮಹಾರಾಷ್ಟ್ರಕ್ಕೆ ಜೈಕಾರ ಕೂಗಿರುವುದು ಖಂಡನೀಯ ಎಂದು ವಕೀಲರ ಸಂಘದ ಉಪಾಧ್ಯಕ್ಷ ಕೆ.ಆರ್.ಇಂದ್ರಕುಮಾರ್ ತಿಳಿಸಿದರು.
ಸಂಘದ ಖಜಾಂಚಿ ಬಿ.ಕೆ.ಯೋಗೇಶ್, ಜಂಟಿ ಕಾರ್ಯದರ್ಶಿ ಅನ್ವೇಶ್, ಪ್ರಭಾಕರ್, ಕೆರೆಮೇಗಳ ಕೊಪ್ಪಲು ಶಂಕರೇಗೌಡ, ಜಗದೀಶ್, ನವೀನ್ ಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.