ಕೆ.ಆರ್.ಪೇಟೆ: ತೀವ್ರ ಜ್ವರದಿಂದ ಬಳಲುತ್ತಿದ್ದ ತಾಲ್ಲೂಕಿನ ಅಗಸರಹಳ್ಳಿ ಗ್ರಾಮದ ಎ.ಆರ್.ಹೇಮಾವತಿ (8) ಮಂಗಳವಾರ ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಡೆಂಗಿಯಿಂದ ಸಾವು ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.
ರವಿಕುಮಾರ್– ರಾಣಿ ದಂಪತಿಯ ಪುತ್ರಿಯಾದ ಎ.ಆರ್. ಹೇಮಾವತಿ ಆ.3ರಿಂದ ಜ್ವರದಿಂದ ಬಳಲುತ್ತಿದ್ದಳು. ಪಟ್ಟಣದ ಶತಮಾನದ ಶಾಲೆಯಲ್ಲಿ ಆಕೆ 2ನೇ ತರಗತಿ ಓದುತ್ತಿದ್ದಳು. ಪೋಷಕರು ಮಗುವನ್ನು ಶಾಲೆಯಿಂದಲೇ ನೇರವಾಗಿ ಮೈಸೂರಿನ ಅಪೊಲೊ ಆಸ್ಪತ್ರೆಗೆ ದಾಖಲು ಮಾಡಿದ್ದರು. ಪರೀಕ್ಷೆ ನಡೆಸಿದ ವೈದ್ಯರು ಡೆಂಗಿ ಜ್ವರವಿದೆ ಎಂದು ತಿಳಿಸಿ ಚಿಕಿತ್ಸೆ ಆರಂಭಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಮಂಗಳವಾರ ಬೆಳಿಗ್ಗೆ ತೀವ್ರ ನಿಗಾ ಘಟಕದಲ್ಲೇ ಮೃತಪಟ್ಟಿದೆ.
‘ಅಪೊಲೊ ಆಸ್ಪತ್ರೆ ವೈದ್ಯರು ನಡೆಸಿರುವ ಪರೀಕ್ಷೆಗಳನ್ನು ಪರಿಶೀಲನೆ ನಡೆಸಲಾಗುವುದು. ನಂತರ ಡೆಂಗಿಯಿಂದ ಸಾವು ಸಂಭವಿಸಿದೆ ಎಂಬ ತೀರ್ಮಾನಕ್ಕೆ ಬರಲಾಗುವುದು. ಗ್ರಾಮಕ್ಕೆ ಭೇಟಿ ನೀಡಿ ಸ್ವಚ್ಛತೆ ಪರೀಕ್ಷೆ ಮಾಡಲಾಗಿದೆ, ಸದ್ಯಕ್ಕೆ ಡೆಂಗಿ ಅಪಾಯ ಕಂಡು ಬಂದಿಲ್ಲ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.