ಶ್ರೀರಂಗಪಟ್ಟಣ: ತಾಲ್ಲೂಕಿನ ಗೌರಿಪುರ ಗ್ರಾಮಕ್ಕೆ ಗರುಡನಉಕ್ಕಡ ಗ್ರಾಮದಿಂದ ಕುಡಿಯುವ ನೀರು ಸರಬರಾಜು ಮಾಡುವ ಕೊಳವೆ ಪದೇ ಪದೆ ಒಡೆಯುತ್ತಿದ್ದು, ಕುಡಿಯುವ ನೀರಿಗೆ ತತ್ವಾರವಾಗಿದೆ.
ಗರುಡನಉಕ್ಕಡ ಮತ್ತು ಗೌರಿಪುರ ಗ್ರಾಮಗಳ ಮಧ್ಯೆ ಬೆಂಗಳೂರು– ಮೈಸೂರು ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಜೆಸಿಬಿ ಬಳಕೆ, ವಾಹನಗಳ ಓಡಾಟದಿಂದ ವಾರದಲ್ಲಿ ಮೂರು ದಿನ ನೀರಿನ ಕೊಳವೆ ಒಡೆಯುತ್ತಿದೆ. ಎರಡು ವಾರಗಳಿಂದ ಮೇಲಿಂದ ಮೇಲೆ ಈ ಸಮಸ್ಯೆ ಉಂಟಾಗುತ್ತಿದೆ. ಹೆದ್ದಾರಿ ಕಾಮಗಾರಿಯ ಉಪ ಗುತ್ತಿಗೆ ಪಡೆದಿರುವವರು ಕುಡಿಯುವ ನೀರಿನ ಕೊಳವೆ ಒಡೆದರೂ ತತ್ಸಾರದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಗ್ರಾ.ಪಂ. ಅಧ್ಯಕ್ಷೆ ಶಾಂತಮ್ಮ, ಪಿಡಿಒ ಆರ್. ಶಿಲ್ಪಾ ಇತರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಗೌರಿಪುರ ಗ್ರಾಮದಲ್ಲಿ 500ಕ್ಕೂ ಹೆಚ್ಚು ಜನರಿದ್ದು, ಒಂದು ಬಿಂದಿಗೆ ನೀರಿಗೂ ಬವಣೆಪಡುತ್ತಿದ್ದೇವೆ. ಹೆದ್ದಾರಿ ಕಾಮಗಾರಿ ಗುತ್ತಿಗೆದಾರರ ಬೇಜವಾ ಬ್ದಾರಿಯಿಂದ ತೊಂದರೆಯಾಗಿದೆ. ಅಧಿಕಾರಿಗಳು ಕೂಡ ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕು. ಇಲ್ಲದಿದ್ದರೆ ತಾ.ಪಂ. ಕಚೇರಿ ಎದುರು ಖಾಲಿ ಬಿಂದಿಗೆಗಳ ಜತೆ ಧರಣಿ ಕೂರುತ್ತೇವೆ ಎಂದು ಗ್ರಾಮದ ಪ್ರಸಾದ್ ಇತರರು ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.