
ಸಾವು (ಪ್ರಾತಿನಿಧಿಕ ಚಿತ್ರ)
ಕಿಕ್ಕೇರಿ: ಹೋಬಳಿಯ ಗೋವಿಂದನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಜಮೀನಿನ ಕೆಲಸಕ್ಕೆ ತೆರಳಿದ್ದ ರೈತ ವಿದ್ಯುತ್ ಪ್ರವಹಿಸಿ ಮೃತರಾದರು.
ಗ್ರಾಮದ ರೈತ ಅಣ್ಣಯ್ಯ(58) ಮೃತ ರೈತ. ಗ್ರಾಮದಲ್ಲಿ ಬಹುತೇಕ ರೈತರು ಒಬ್ಬರ ಜಮೀನಿನಲ್ಲಿ ಮತ್ತೊಬ್ಬರು ಎನ್ನುವಂತೆ ಮುಯ್ಯಿ ಆಳು ಕೆಲಸವನ್ನು ಪರಸ್ಪರ ಮಾಡುತ್ತಿದ್ದರು. ಇದೇ ರೀತಿ ಗ್ರಾಮದ ರೈತ ಶಿವಕುಮಾರ್(ಕೆಂಪಯ್ಯನ ಮಗ) ಜಮೀನಿನಲ್ಲಿ ಮುಯ್ಯಿ ಆಳು ಕೆಲಸ ಮಾಡಲು ಶುಕ್ರವಾರ ಮಧ್ಯಾಹ್ನ ಅಣ್ಣಯ್ಯ ಅವರು ತೆರಳಿದ್ದರು.
ಜಮೀನಿನ ಸಮೀಪದಲ್ಲಿಯೇ ಇದ್ದ ಮಹದೇವಪ್ಪ ಅವರ ಜಮೀನಿನ ಕೊಳವೆ ಬಾವಿ ಬಳಿ ನೀರು ಕುಡಿಯಲು ಹೋಗಿದ್ದ ಅವರು, ಕೊಳವೆ ಬಾವಿಗೆ ಹಾಕಲಾಗಿದ್ದ ಮುಳ್ಳಿನ ತಂತಿ ಮುಟ್ಟಿದ್ದು, ಅದರಿಂದ ವಿದ್ಯುತ್ ಪ್ರವಹಿಸಿದೆ. ಕೂಗಿಕೊಂಡ ಅವರನ್ನು ಬಿಡಿಸಲು ಬಂದ ಶಿವಕುಮಾರ್ ಅವರಿಗೂ ವಿದ್ಯುತ್ ಪ್ರವಹಿಸಿ ಇಬ್ಬರೂ ಅಸ್ವಸ್ಥರಾಗಿದ್ದಾರೆ.
ಇಬ್ಬರನ್ನೂ ವಿದ್ಯುತ್ ಸಂಪರ್ಕದಿಂದ ಬಿಡಿಸಿದ ಗ್ರಾಮಸ್ಥರು ಗಾಯಾಳುವಾಗಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಅವರನ್ನು ತುರ್ತು ಚಿಕಿತ್ಸೆಗೆ ಕಿಕ್ಕೇರಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದು, ಅಣ್ಣಯ್ಯ ಮೃತನಾಗಿರುವುದನ್ನು ವೈದ್ಯರು ತಿಳಿಸಿದ್ದಾರೆ. ತೀವ್ರ ಅಸ್ವಸ್ಥನಾಗಿದ್ದ ಶಿವಕುಮಾರ್ ಅವರನ್ನು ಚನ್ನರಾಯಪಟ್ಟಣದ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.
ಅಣ್ಣಯ್ಯ ಸಾವಿಗೆ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಳ್ಳಿನ ತಂತಿ ಮೇಲೆ ಅಸುರಕ್ಷಿತವಾಗಿ ವಿದ್ಯುತ್ ಕೇಬಲ್ ಹಾಕಿರುವುದೇ ಕಾರಣ, ತಪ್ಪಿತಸ್ಥರ ಮೇಲೆ ಕಾನೂನು ರೀತಿ ಕ್ರಮವಹಿಸಬೇಕು ಎಂದು ಮೃತರ ಪತ್ನಿ ಕಾಂತಮಣಿ ಕಿಕ್ಕೇರಿ ಪೋಲಿಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಮೃತರಿಗೆ ಪುತ್ರ, ಪುತ್ರಿ ಇದ್ದಾರೆ. ಗ್ರಾಮದಲ್ಲಿನ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.