ಮಳವಳ್ಳಿ: ರೈತರ ಪಂಪ್ಸೆಟ್ಗಳ ವಿದ್ಯುತ್ ಸಂಪರ್ಕದ ನೋಂದಣಿಗೆ ದುಬಾರಿ ಶುಲ್ಕ ವಿಧಿಸಿರುವ ರಾಜ್ಯ ಸರ್ಕಾರದ ನಡೆ ಹಗಲು ದರೋಡೆಯಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಸಂಚಾಲಕ ಎನ್.ಎಲ್.ಭರತ್ ರಾಜ್ ಆರೋಪಿಸಿದರು.
ಪಟ್ಟಣದ ಕರ್ನಾಟಕ ಪ್ರಾಂತ ರೈತ ಸಂಘದ ಕಚೇರಿಯಲ್ಲಿ ಪಂಪ್ಸೆಟ್ ಬಳಕೆದಾರರ ಸಂಘದ ಸದಸ್ಯರೊಂದಿಗೆ ಚರ್ಚಿಸಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ ಶೇ 70ರಷ್ಟು ಅಂದರೆ ಐದು ಲಕ್ಷ ಮಂದಿ ಕೃಷಿ ರಂಗದಲ್ಲಿ ತೊಡಗಿಸಿದ್ದಾರೆ. ಅತಿ ಸಣ್ಣ, ಸಣ್ಣ ರೈತರ ಸಂಖ್ಯೆ ಶೇ 96ರಷ್ಟಿದೆ. ನೀರಾವರಿ ಸೌಲಭ್ಯ ಶೇ 65ರಷ್ಟಿದ್ದರೆ, ಕಾಲುವೆ ಮೂಲಕ ಶೇ 47 ಹಾಗೂ ಬೋರ್ವೆಲ್ಗಳಿಂದ ಶೇ 41ರಷ್ಟರಲ್ಲಿ ಪ್ರದೇಶ ನೀರಾವರಿ ಸೌಲಭ್ಯ ಹೊಂದಿದೆ. ಹೀಗಾಗಿ ಪಂಪ್ಸೆಟ್ ಗಳಿಗೆ ದುಬಾರಿ ಶುಲ್ಕ ವಿಧಿಸಲು ಮುಂದಾಗಿರುವ ಸರ್ಕಾರದ ನಡೆ ಅವೈಜ್ಞಾನಿಕವಾಗಿದೆ’ ಎಂದರು.
‘ಹಲವು ರೈತರು ಸಾಲ ಮಾಡಿ ಬೋರ್ವೆಲ್ ಕೊರೆಸಿದ್ದಾರೆ. ಆದರೆ ರಾಜ್ಯ ಸರ್ಕಾರದ ಆದೇಶದಂತೆ ನೋಂದಣಿಯಾಗದ ಪಂಪ್ ಸೆಟ್ ಗಳ ನೋಂದಣಿಗೆ ಸರ್ಕಾರ ₹27ಸಾವಿರ ವಸೂಲಿ ಮಾಡುತ್ತಾ ರೈತರ ಗಾಯದ ಮೇಲೆ ಬರೆ ಎಳೆದಿದ್ದಾರೆ. ಇದೊಂದು ರೀತಿ ಹಗಲು ದರೋಡೆಯಾದಂತಾಗಿದೆ. ಇದು ರೈತರನ್ನು ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ’ ಎಂದರು.
‘ಬೇಸಿಗೆಯಲ್ಲಿ ವಿದ್ಯುತ್ ಸಂಪರ್ಕಗಳನ್ನು ಕಡಿತ ಮಾಡಿ ಬೆಳೆ ಹಾಳು ಮಾಡುತ್ತಿದ್ದಾರೆ. ಈಗಾಗಲೇ ಸಂಕಷ್ಟದಲ್ಲಿರುವ ರೈತ ತಕ್ಷಣಕ್ಕೆ ₹27 ಸಾವಿರ ಕಟ್ಟುವುದು ಕಷ್ಟವಾಗಿದೆ. ಕೊಳವೆ ಬಾವಿ ಹತ್ತಿರಕ್ಕೆ ವಿದ್ಯುತ್ ಲೈನ್ ತೆಗೆದುಕೊಂಡು ಹೋಗಲು ಟಿಸಿ, ವಿದ್ಯುತ್ ಕಂಬ ಸೇರಿದಂತೆ ಹಲವು ಸವಲತ್ತುಗಳಿಗೆ ಸುಮಾರು ₹1.5 ಲಕ್ಷದಷ್ಟು ವೆಚ್ಚ ಮಾಡಬೇಕಾಗುತ್ತದೆ. ಬೇಕಾಗಿದೆ. ಸರ್ಕಾರ ಹಾಗೂ ಇಲಾಖೆಯ ನೀತಿಯಿಂದ ರೈತರು ಆತಂಕ ಎದುರಿಸುವಂತಾಗಿದೆ’ ಎಂದು ಆರೋಪಿಸಿದರು.
‘ಉದ್ಯಮಿಗಳಿಗೆ ಹಲವಾರು ಸೌಲಭ್ಯಗಳನ್ನು ನೀಡುವ ಸರ್ಕಾರ ರೈತರಿಗೆ ಉಚಿತ ವಿದ್ಯುತ್ ನೀಡದೆ ವಂಚಿಸಿ, ಖಾಸಗೀಕರಣ ಮಾಡುವುದರ ಮೂಲಕ ರೈತರ ಪಂಪ್ ಸೆಟ್ ಗಳಿಗೆ ಮುಂದಿನ ದಿನಗಳಲ್ಲಿ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಸಿ ಕಾಸಿದ್ದವರಿಗೆ ಕರೆಂಟ್ ನೀಡುವ ತಂತ್ರಗಾರಿಕೆ ಮಾಡುವ ಹುನ್ನಾರ ನಡೆಸಿದೆ. ಕೇವಲ ₹50 ನೋಂದಣಿ ಶುಲ್ಕ ಪಡೆದು ಉಚಿತವಾಗಿ ವಿದ್ಯುತ್ ನೀಡಬೇಕು. ಟಿಸಿ ದುರಸ್ತಿಯನ್ನು 24 ಗಂಟೆಯೊಳಗೆ ಮಾಡಬೇಕು. ವಿದ್ಯುತ್ ತೊಂದರೆಯಿಂದ ಬೆಳೆ ಹಾಳಾದರೆ ಸೂಕ್ತ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
ಮುಖಂಡರಾದ ಹನುಮಂತು, ಚಿಕ್ಕಣ್ಣ, ರವಿ, ಗುರುಸ್ವಾಮಿ, ಹೇಮಂತ್, ಕುಮಾರ್, ಕೆ.ಬಿ.ಸ್ವಾಮಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.