ಶ್ರೀರಂಗಪಟ್ಟಣ: ಇಲ್ಲಿನ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಭವದನಲ್ಲಿ, ಪಿತೃ ಪಕ್ಷದ ನಿಮಿತ್ತ ಆನ್ಲೈನ್ನಲ್ಲಿ ಶ್ರಾದ್ಧ ಕಾರ್ಯಗಳು ನಡೆದವು.
ಕೋವಿಡ್ ಕಾರಣ ಇಲ್ಲಿಗೆ ಬರಲು ಆಗದವರು ಜೋತಿಷಿ ಡಾ.ಭಾನುಪ್ರಕಾಶ್ ಶರ್ಮಾ ಅವರನ್ನು ಸಂಪರ್ಕಿಸಿ ಆನ್ಲೈನ್ನಲ್ಲಿ ತಮ್ಮ ಪಿತೃಗಳಿಗೆ ಶ್ರಾದ್ಧ ಕಾರ್ಯ ನಡೆಸುವಂತೆ ಮನವಿ ಸಲ್ಲಿಸಿದ್ದರು. ವೈದಿಕರ ತಂಡ ಮೃತಪಟ್ಟವರ ಹೆಸರಿನಲ್ಲಿ ತಿಲ ತರ್ಪಣ, ಪಿಂಡ ಪ್ರದಾನ ಇತರ ವಿಧಿ, ವಿಧಾನಗಳು ಪೂರೈಸಿದೆ. ಗುರುವಾರ 50ಕ್ಕೂ ಹೆಚ್ಚು ಜನರ ಹೆಸರಿನಲ್ಲಿ ಆನ್ಲೈನ್ನಲ್ಲಿ ಶ್ರಾದ್ಧ ನಡೆಯಿತು.
ಡಾ.ಭಾನುಪ್ರಕಾಶ್ ಶರ್ಮಾ ಮಾತನಾಡಿ, ‘ಕೋವಿಡ್ ಕಾರಣದಿಂದ ರಾಜ್ಯ, ಹೊರ ರಾಜ್ಯದ ಸಾಕಷ್ಟು ಜನರು ಈ ಬಾರಿ ಇಲ್ಲಿಗೆ ಬರಲು ಆಗಿಲ್ಲ. ತಮ್ಮ ಪಿತೃಗಳಿಗೆ ಶ್ರಾದ್ಧ ನೆರವೇರಿಸುವಂತೆ ಫೋನ್ ಮೂಲಕ ಸಂಪರ್ಕಿಸಿದ್ದರು. ಅವರ ಅಪೇಕ್ಷೆಯನ್ನು ಈಡೇರಿಸಿದ್ದೇವೆ. ಅನಿವಾಸಿ ಭಾರತೀಯರು ಕೂಡ ತಮ್ಮ ಪಿತೃಗಳ ಹೆಸರಿನಲ್ಲಿ, ಆನ್ಲೈನ್ನಲ್ಲೇ ಶ್ರಾದ್ಧ ಕಾರ್ಯ ಪೂರೈಸಿದ್ದಾರೆ. ಐದಾರು ದಿನಗಳಿಂದ ಆನ್ಲೈನ್ನಲ್ಲಿ ಪಿಂಡ ಪ್ರದಾನ, ತಿಲ ತರ್ಪಣ ಇತರ ಪಿತೃಪಕ್ಷದ ಸಾಂಪ್ರದಾಯಿಕ ಪೂಜೆಗಳು ನಡೆದಿವೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.