ಮದ್ದೂರು: ತಾಲ್ಲೂಕಿನ ತೈಲೂರು ಗ್ರಾಮದ ಗ್ರಾಮದೇವತೆ ತೈಲೂರಮ್ಮನ ವರ ಜಾತ್ರಾ ಮಹೋತ್ಸವದ ಅಂಗ ವಾಗಿ ಶನಿವಾರ ಬೆಳಿಗ್ಗೆ ಕೊಂಡ ಮಹೋತ್ಸವ ಪೂಜಾ ಕಾರ್ಯಕ್ರಮ ಭಕ್ತಿ ಭಾವದಿಂದ ನಡೆಯಿತು.
ಕೊಂಡೋತ್ಸವದ ಅಂಗವಾಗಿ ಶುಕ್ರವಾರದಿಂದಲೇ ಸಿದ್ಧತಾ ಕಾರ್ಯ ಕ್ರಮಗಳು ನಡೆದವು. ಮಧ್ಯಾಹ್ನ 1 ಗಂಟೆಗೆ ಕೊಂಡಕ್ಕೆ ಸೌದೆ, ಸಾಯಂಕಾಲ 6ಗಂಟೆಗೆ ಬಂಡಿ ಉತ್ಸವ, ರಾತ್ರಿ 8ಕ್ಕೆ ಕೊಂಡಕ್ಕೆ ಅಗ್ನಿ ಸ್ಪರ್ಶ, ರಾತ್ರಿ 10ಕ್ಕೆ ಗಂಗಾಮಸ್ಥರ ಮಂಚಮ್ಮ ದೇವರ ಕರಗೋತ್ಸವ, ರಾತ್ರಿ 1 ಗಂಟೆಗೆ ದಂಡಮ್ಮ ದೇವರ ಕರಗೋತ್ಸವ ನಡೆದವು. ಶನಿವಾರ ನಸುಕಿನ 5 ಗಂಟೆಗೆ ತೈಲೂರು ಅಮ್ಮನವರ ಕೊಂಡೋತ್ಸವ ಪ್ರಾರಂಭವಾಯಿತು.
ಹಾಗಲಹಳ್ಳಿಯ ಸೋಮಶೇಖರ್ ಸತತ 8ನೇ ಬಾರಿಗೆ ದೇವರನ್ನು ತಲೆಯ ಮೇಲೆ ಹೊತ್ತುಕೊಂಡು ಕೊಂಡ ಹಾಯ್ದರು. ಈ ವೇಳೆ ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡು ದೇವರ ದರ್ಶನವನ್ನು ಪಡೆದು ದೇವರಿಗೆ ಪೂಜೆ ಸಲ್ಲಿಸಿದರು, ರಾತ್ರಿ ಅನ್ನ ಸಂತರ್ಪಣೆ ನಡೆಯಿತು.
ಬೆಳಿಗ್ಗೆ 8ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತೈಲೂರು ಅಮ್ಮನವರಿಗೆ ಮತ್ತು ಮಾದನಾಯಕನಹಳ್ಳಿ ಸಿದ್ದರಾಮೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ 3ರಿಂದ ದೇವಸ್ಥಾನದ ಆವರಣದಲ್ಲಿ ಸಿಡಿ ಮಹೋತ್ಸವ ನಡೆಯಿತು. ಸಂಜೆ 5ರ ನಂತರ ತೈಲೂರಮ್ಮ ಮತ್ತು ಸಿಡಿರಣ್ಣ ಹಾಗೂ ಹುಣಸೇಮರದದೊಡ್ಡಿ ಮಾರಮ್ಮನವರ ಉತ್ಸವ ನಡೆಯಿತು. ರಾತ್ರಿ 8.30ಕ್ಕೆ ಗ್ರಾಮದ ಕನ್ನಡ ಜ್ಯೋತಿ ಯುವಕರ ಸಂಘದವರಿಂದ ‘ತಾಯಿಗೆ ಕೊಟ್ಟ ಭಾಷೆ’ ಅಥವಾ ಮಾತಿಗೆ ತಪ್ಪದ ಮಗ' ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.