ಪಾಂಡವಪುರ: ಇಲ್ಲಿನ ಆಟೊ ಚಾಲಕ ವಿಷ್ಣುವಿಠಲ ಅವರು ಲಾಕ್ಡೌನ್ನಿಂದ ತೊಂದರೆಗೆ ಒಳಗಾಗಿರುವ ನೂರಕ್ಕೂ ಹೆಚ್ಚು ಮಂದಿಗೆ ನಿತ್ಯ ಒಂದು ಹೊತ್ತು ಉಚಿತ ಆಹಾರ, ನೀರನ್ನು ತಿಂಗಳಿನಿಂದ ನೀಡುತ್ತಿದ್ದಾರೆ.
ಪಟ್ಟಣದಲ್ಲಿನ ಭಿಕ್ಷಕರು, ನಿರ್ಗತಿಕರು, ಬೀದಿ ವ್ಯಾಪಾರಿಗಳು, ಆಸ್ಪತ್ರೆಯ ಮಹಿಳಾ ಸ್ವಚ್ಛತಾ ಕೆಲಸಗಾರರು, ಹೋಂ ಗಾರ್ಡ್ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಮಂದಿಗೆ ವಿಷ್ಣುವಿಠಲ ಅವರು ಆಹಾರ ನೀಡುತ್ತಿದ್ದಾರೆ. ವಿಷ್ಣು ವಿಠಲ ಅವರು ಆಟೊದಿಂದ ಗಳಿಸಿದ ಹಣದ ಜತೆಗೆ ಇತರ ಚಾಲಕರು, ಸ್ನೇಹಿತರ ಸಹಕಾರದೊಂದಿಗೆ ಅನ್ನ ನೀಡಿ ನೆರವಾಗುತ್ತಿದ್ದಾರೆ.
ಮನೆಯಲ್ಲೇ ತಯಾರಿಸಿದ ಆಹಾರವನ್ನು ಆಟೊದಲ್ಲಿ ಇಟ್ಟುಕೊಂಡು ಮಧ್ಯಾಹ್ನ ನೀಡುತ್ತಿದ್ದಾರೆ. ದಿನಕ್ಕೆ ₹ 3ಸಾವಿರ ವೆಚ್ಚವಾಗುತ್ತಿದೆ. ಚಿತ್ರಾನ್ನ, ತರಕಾರಿ ಬಾತ್, ಇಡ್ಲಿ ನೀಡುತ್ತಿದ್ದಾರೆ.
‘ಆಟೊ ಚಾಲಕ ವಿಷ್ಣು ವಿಠಲ ಅವರು ಹಸಿದ ಹಲವರಿಗೆ ಅನ್ನ ನೀಡುತ್ತಿರುವುದು ಅನುಕೂಲವಾಗಿದೆ’ ಎಂದು ಬೀದಿ ವ್ಯಾಪಾರಿಗಳಾದ ಕಡ್ಲೆಕಾಯಿ ಮಂಜು, ಶಂಕರಣ್ಣ ಹೇಳುತ್ತಾರೆ.
‘ಲಾಕ್ಡೌನ್ನಿಂದ ನಾನು ಸೇರಿದಂತೆ ಆಟೊ ಚಾಲಕರು ಕಷ್ಟದಲ್ಲಿದ್ದೇವೆ. ಆದರೆ, ನಮಗಿಂತಲೂ ಕಷ್ಟದಲ್ಲಿರುವವರಿಗೆ ಅಲ್ಪಪ್ರಮಾಣದ ಸೇವೆ ಸಲ್ಲಿಸಬೇಕು ಎಂಬ ಸ್ವಯಂ ಇಚ್ಛೆಯಿಂದ ಈ ಕೆಲಸ ಮಾಡುತ್ತಿದ್ದಾನೆ. ಸ್ನೇಹಿತರೂ ಕೈಜೋಡಿಸಿದ್ದಾರೆ. ಇದರಿಂದ ತೃಪ್ತಿ ಇದೆ’ ಎಂದು ವಿಷ್ಣುವಿಠಲ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.