ADVERTISEMENT

ವಿದ್ಯುತ್‌ ಸ್ಪರ್ಶದಿಂದ ಗಾಯಗೊಂಡಿದ ಫುಟ್‌ಬಾಲ್‌ ಆಟಗಾರ ಎಂ.ಎನ್‌.ವಿಶ್ವಾಸ್‌ ಸಾವು

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 12:32 IST
Last Updated 9 ಜುಲೈ 2022, 12:32 IST
 ಎಂ.ಎನ್‌.ವಿಶ್ವಾಸ್‌
 ಎಂ.ಎನ್‌.ವಿಶ್ವಾಸ್‌    

ಮಂಡ್ಯ: ವಿದ್ಯುತ್‌ ಸ್ಪರ್ಶದಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ರಾಜ್ಯಮಟ್ಟದ ಫುಟ್‌ಬಾಲ್‌ ಆಟಗಾರ ಎಂ.ಎನ್‌.ವಿಶ್ವಾಸ್‌ (21) ಚಿಕಿತ್ಸೆಗೆ ಸ್ಪಂದಿಸದೇ ಶನಿವಾರ ಮೃತಪಟ್ಟಿದ್ದಾರೆ.

ನಗರದ ಸ್ವರ್ಣ ಫುಟ್‌ಬಾಲ್‌ ಕ್ಲಬ್‌ ಪರವಾಗಿ ಆಡುತ್ತಿದ್ದ ವಿಶ್ವಾಸ್‌ ರಾಜ್ಯಮಟ್ಟದ ಹಲವು ಟೂರ್ನಿಯಲ್ಲಿ ಭಾಗವಹಿಸಿದ್ದರು. ಪಿಇಎಸ್‌ ಕಾಲೇಜಿನಲ್ಲಿ ಬಿ.ಕಾಂ ಮಾಡುತ್ತಿದ್ದ ಅವರು ಫುಟ್‌ಬಾಲ್‌ ಟೂರ್ನಿಗಳಲ್ಲಿ ಮೈಸೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು. ಆಟದಲ್ಲಿ ಭರವಸೆ ಮೂಡಿಸಿದ್ದ ಅವರು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಆಡುವ ಕನಸು ಕಟ್ಟಿಕೊಂಡಿದ್ದರು.

ವಿಶ್ವಾಸ್‌ ನಗರದ ಗುತ್ತಲು ಬಡಾವಣೆಯ ಕಾರ್ಪೆಂಟರ್‌ ನರಸಿಂಹಮೂರ್ತಿ ಹಾಗೂ ಶಾಮಲ ದಂಪತಿಯ ಪುತ್ರ. ಹೊಸದಾಗಿ ಕಟ್ಟುತ್ತಿರುವ ತಮ್ಮ ಮನೆಯ ಗೋಡೆಗೆ ನೀರು ಹಾಕುವಾಗ ಜುಲೈ 1ರಂದು ಅವರಿಗೆ ವಿದ್ಯುತ್‌ ಸ್ಪರ್ಶವಾಗಿತ್ತು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಮೈಸೂರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ADVERTISEMENT

ವಿಶ್ವಾಸ್‌ ಚಿಕಿತ್ಸೆಗಾಗಿ ನಗರದ ಕ್ರೀಡಾ ಪ್ರೇಮಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಹಣ ನೀಡಿದ್ದರು. ವಿದ್ಯುತ್‌ ಸ್ಪರ್ಶದಿಂದ ದೇಹಕ್ಕೆ ಶೇ 80ರಷ್ಟು ಗಾಯವಾಗಿ ಅವರು ಕೋಮಾ ಸ್ಥಿತಿಗೆ ತೆರಳಿದ್ದರು. ಚಿಕಿತ್ಸೆಗೆ ಸ್ಪಂದಿಸದ ಅವರು ನಿಧನರಾದರು.

ಶನಿವಾರ ಸಂಜೆ ಗುತ್ತಲು ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.