ADVERTISEMENT

500 ವರ್ಷಗಳ ಹಿಂದಿನ ಶ್ರೀರಂಗಪಟ್ಟಣದ ಗದ್ದೆ ರಂಗನಾಥ ದೇಗುಲಕ್ಕೆ ಆಪತ್ತು!

ದೇವಾಲಯ ಸುತ್ತ ಹೆದ್ದಾರಿ ಕಾಮಗಾರಿಯ ಮಣ್ಣಿನ ರಾಶಿ

ಗಣಂಗೂರು ನಂಜೇಗೌಡ
Published 29 ಆಗಸ್ಟ್ 2020, 3:22 IST
Last Updated 29 ಆಗಸ್ಟ್ 2020, 3:22 IST
ಶ್ರೀರಂಗಪಟ್ಟಣ ಸಮೀಪದ ಕಾವೇರಿ ನದಿ ತೀರದಲ್ಲಿರುವ ಗದ್ದೆ ರಂಗನಾಥಸ್ವಾಮಿ ದೇಗುಲದ ಸುತ್ತ ಹೆದ್ದಾರಿ ಕಾಮಗಾರಿ ನಡೆದಿದೆ (ಎಡಚಿತ್ರ). ದೇಗುಲದ ಹಿಂಭಾಗಕ್ಕೆ ಮಣ್ಣು ಸುರಿದಿರುವುದು
ಶ್ರೀರಂಗಪಟ್ಟಣ ಸಮೀಪದ ಕಾವೇರಿ ನದಿ ತೀರದಲ್ಲಿರುವ ಗದ್ದೆ ರಂಗನಾಥಸ್ವಾಮಿ ದೇಗುಲದ ಸುತ್ತ ಹೆದ್ದಾರಿ ಕಾಮಗಾರಿ ನಡೆದಿದೆ (ಎಡಚಿತ್ರ). ದೇಗುಲದ ಹಿಂಭಾಗಕ್ಕೆ ಮಣ್ಣು ಸುರಿದಿರುವುದು   

ಶ್ರೀರಂಗಪಟ್ಟಣ: ಪಟ್ಟಣದ ಪ್ರಮುಖ ಸ್ಮಾರಕಗಳಲ್ಲಿ ಒಂದಾದ ಗದ್ದೆ ರಂಗನಾಥ ಸ್ವಾಮಿ ದೇವಾಲಯ ಹೆದ್ದಾರಿ ನಿರ್ಮಾಣ ಕಾಮಗಾರಿಯಿಂದ ಮಣ್ಣಿನಡಿ ಮುಚ್ಚಿಹೋಗುವ ಅಪಾಯದಲ್ಲಿದೆ.

ಕಾವೇರಿ ನದಿ ದಂಡೆಯಲ್ಲಿರುವ ದೇವಾಲಯ ಪಕ್ಕದಲ್ಲಿ ಮಣ್ಣು ಸುರಿಯಲಾಗಿದೆ. ದೇಗುಲದ ಹಿಂಬದಿ ಗೋಡೆ ಭಾಗಶಃ ಮಣ್ಣಿನಿಂದ ಮುಚ್ಚಿಕೊಂಡಿದೆ. ಎಡ ಮತ್ತು ಬಲ ಭಾಗದಲ್ಲೂ ರಾಶಿಗಟ್ಟಲೆ ಮಣ್ಣು ಸುರಿಯಲಾಗಿದೆ. ಇದರಿಂದಾಗಿ ದೇವಾಲಯ ಸೌಂದರ್ಯವೂ ಹಾಳಾಗಿದೆ.

ದೇಗುಲದ ಮುಂದಿನ ಆನೆ ಶಿಲ್ಪಗಳು ಈಗಾಗಲೇ ಮಣ್ಣಿನಡಿ ಮುಚ್ಚಿಹೋಗಿವೆ. ಕೆಲವೇ ದಿನಗಳಲ್ಲಿ ದೇವಾಲಯ ಮಣ್ಣಿನಿಂದ
ತುಂಬಿಕೊಳ್ಳಬಹುದು.

ADVERTISEMENT

16ನೇ ಶತಮಾನದ್ದು: ಗದ್ದೆ ರಂಗನಾಥಸ್ವಾಮಿ ದೇವಾಲಯ ವಿಜಯನಗರ ಕಾಲದಲ್ಲಿ ನಿರ್ಮಾಣವಾಗಿದೆ ಎಂಬ ಐತಿಹ್ಯವಿದೆ. 12 ಬೃಹತ್‌ ಕಲ್ಲಿನ ಕಂಬಗಳ ಆಧಾರದಲ್ಲಿ ದೇಗುಲವನ್ನು ನಿರ್ಮಿಸಲಾಗಿದೆ. ಮುಂದಿನ ಕಂಬಗಳು ಗೋಲಾಕಾರದಲ್ಲಿ, ಉಳಿದವು ಚೌಕಾಕಾರದಲ್ಲಿವೆ. ಚಾವಣಿ ಕೂಡ ಕಲ್ಲಿನಿಂದ ಕೂಡಿದೆ. ಮೂರೂವರೆ ಅಡಿ ಎತ್ತರದ ಜಗುಲಿಯ ಮೇಲಿರುವ ಗರ್ಭಗುಡಿಯಲ್ಲಿ ರಂಗನಾಥ ಸ್ವಾಮಿ ಉಬ್ಬು ಶಿಲ್ಪವಿದೆ. ಭೂದೇವಿ ಸಹಿತ ಪವಡಿಸಿದ್ದಾನೆ.

ಸ್ಮಾರಕದ ಪಟ್ಟಿಯಲ್ಲಿ ಇಲ್ಲ: 500 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಗದ್ದೆ ರಂಗನಾಥ ಸ್ವಾಮಿ ದೇವಾಲಯ ಸ್ಮಾರಕಗಳ ಪಟ್ಟಿಯಲ್ಲೇ ಇಲ್ಲ ಎಂಬುದು ಅಚ್ಚರಿಯ ಸಂಗತಿ. ಕಾವೇರಿ ನದಿ ದ್ವೀಪದ ಒಳಗೇ ಇರುವ ಈ ದೇವಾಲಯವನ್ನು ಪ್ರಾಚ್ಯ ವಸ್ತು ಇಲಾಖೆ ಇದುವರೆಗೆ ‘ಸಂರಕ್ಷಿತ ಸ್ಮಾರಕ’ದ ಪಟ್ಟಿಗೆ ಸೇರಿಸಿಲ್ಲ. ಗದ್ದೆ ಬಯಲಿನಲ್ಲಿರುವ ಈ ದೇವಾಲಯ ಸದ್ಯ ಹೆದ್ದಾರಿ ಕಾಮಗಾರಿಗಾಗಿ ಮಣ್ಣು ಪಾಲಾಗುತ್ತಿದೆ.

ರಾಜ್ಯ ಪ್ರಾಚ್ಯ ವಸ್ತು ಇಲಾಖೆ ಎಇಇ ಕುಬೇರಪ್ಪ ಶುಕ್ರವಾರ ಗದ್ದೆ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಮಾತನಾಡಿದ ಅವರು, ‘ದೇವಾಲಯದ ಸ್ಥಿತಿಗತಿ ಕುರಿತು ಇಲಾಖೆ ಆಯುಕ್ತರಿಗೆ ವರದಿ ಸಲ್ಲಿಸುತ್ತೇನೆ. ಸ್ಮಾರಕವನ್ನು ಮಣ್ಣಿನಲ್ಲಿ ಮುಚ್ಚಬಾರದು, ವಿರೂಪಗೊಳಿಸಿದರೆ ಅಥವಾ ಮಣ್ಣಿನಲ್ಲಿ ಮುಚ್ಚಿ ಹಾಕಿದರೆ ಪ್ರಕರಣ ದಾಖಲಿಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ದೇವಾಲಯವನ್ನು ಮಣ್ಣಿನಲ್ಲಿ ಮುಚ್ಚಿ ಅದರ ಮೇಲೆ ರಸ್ತೆ ಮಾಡುತ್ತಿರುವುದು ನೋವು ತರಿಸಿದೆ. ದೇವಾಲಯವನ್ನು ಸ್ಥಳಾಂತರಿಸಿದರೆ ಅದಕ್ಕೆ ಅಗತ್ಯ ಇರುವಷ್ಟು ಜಾಗವನ್ನು ಕೊಡಲು ಸಿದ್ಧನಿದ್ದೇನೆ’ ಎಂದು ಗಂಜಾಂನ ವಕೀಲ ಗೋವಿಂದರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.