ADVERTISEMENT

ಗಗನಚುಕ್ಕಿ ಜಲಪಾತೋತ್ಸವ: ನೃತ್ಯ, ಸಂಗೀತಕ್ಕೆ ಮನಸೋತ ಯುವಸಮೂಹ

ಟಿ.ಕೆ.ಲಿಂಗರಾಜು
Published 15 ಸೆಪ್ಟೆಂಬರ್ 2025, 2:52 IST
Last Updated 15 ಸೆಪ್ಟೆಂಬರ್ 2025, 2:52 IST
<div class="paragraphs"><p>ಗಗನಚುಕ್ಕಿ ಜಲಪಾತೋತ್ಸವದಲ್ಲಿ ನಟ ಡಾಲಿ ಧನಂಜಯ ನೃತ್ಯ ಮಾಡಿದರು</p></div>

ಗಗನಚುಕ್ಕಿ ಜಲಪಾತೋತ್ಸವದಲ್ಲಿ ನಟ ಡಾಲಿ ಧನಂಜಯ ನೃತ್ಯ ಮಾಡಿದರು

   

ಮಳವಳ್ಳಿ: ಗಗನಚುಕ್ಕಿ ಜಲಪಾತೋತ್ಸವಕ್ಕೆ ಶನಿವಾರ ಮತ್ತು ಭಾನುವಾರ ರಾಜ್ಯದ ವಿವಿಧ ಭಾಗಗಳಿಂದ ನಿರೀಕ್ಷೆಗೂ ಮೀರಿ ಬಂದಿದ್ದ ಸಾವಿಸಾರು ಪ್ರವಾಸಿಗರು ಹಾಗೂ ಸಾರ್ವಜನಿಕರು ಲೇಸರ್ ಶೋ ಹಾಗೂ ಖ್ಯಾತ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ಹಾಗೂ ಗುರು ಕಿರಣ್ ಸಂಗೀತಕ್ಕೆ ಮನ ಸೋತರು.

ಬೆಂಗಳೂರು, ಮೈಸೂರು, ಚಾಮರಾಜನಗರ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಿಂದ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ತಂಡೋಪ ತಂಡವಾಗಿ ಆಗಮಿಸಿದ ಪ್ರವಾಸಿಗರು ಪ್ರಕೃತಿ ನಡುವಿನ ಗಗನಚುಕ್ಕಿ ಜಲಪಾತೋತ್ಸವದ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಂಡರು.

ADVERTISEMENT

ಗಗನದಿಂದ ದುಮ್ಮುಕ್ಕುವ ನೀರಿಗೆ ಅಳವಡಿಸಿದ ವಿದ್ಯುತ್ ದೀಪಾಂಲಕಾರ ಹಾಗೂ ಲೇಸರ್ ಶೋ ನೋಡಲು ಎರಡೂ ದಿನ ಪ್ರವಾಸಿಗರ ಬಹುದೊಡ್ಡ ದಂಡೇ ಹರಿದು ಬಂದಿತ್ತು.

ಲೇಸರ್ ಶೋ ನಡುವೆ ಪ್ರವಾಸಿಗರು ಪೋಟೋ ಕ್ಲಿಕ್ಕಿಸಿಗೊಳ್ಳುವುದಕ್ಕೆ ಮುಗಿಬಿದ್ದರು. ಗಗನಚುಕ್ಕಿ ಜಲಪಾತೋತ್ಸದ ವೈಭವ ನೋಡಗರ ಮನ ಸೆಳೆಯುವುದರ ಜೊತೆಗೆ ಹೆಸರಾಂತ ಕಲಾವಿದರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಿ ಸಂಭ್ರಮಿಸಿದರು.

ಮಲ್ಲಿಕ್ಯಾತನಹಳ್ಳಿ ಬಳಿ ನಿರ್ಮಿಸಿದ ಬೃಹತ್ ವೇದಿಕೆಯಲ್ಲಿ ಶನಿವಾರ ಸಂಜೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಕೆ.ಆರ್.ಪೇಟೆ ಶಿವರಾಜ್ ಹಾಗೂ ನಯನಾ ಅವರ ಕಾರ್ಯಕ್ರಮ ಪ್ರವಾಸಿಗರನ್ನು ನೆಗೆಕಡಲಿನಲ್ಲಿ ತೇಲಿಸಿತು. ರಾತ್ರಿ ಖ್ಯಾತ ನಿರ್ದೇಶಕ ಅರ್ಜುನ್‌ ಜನ್ಯ ನಡೆಸಿಕೊಟ್ಟ ಸಂಗೀತ ಸಂಜೆ ನೃತ್ಯ ಮಿಶ್ರಿತ ಕಾರ್ಯಕ್ರಮದಲ್ಲಿ ಯುವಸಮೂಹ ಕುಣಿದು ಕುಪ್ಪಳಿಸಿತು. ಚಲನಚಿತ್ರ ನಟಿ ರಾಗಿಣಿ ತ್ರಿವೇದಿ ಅವರ ನೃತ್ಯ ಪ್ರದರ್ಶನ ಹಾಗೂ ಗಾಯಕಿ ಮಾನ್ವಿತಾ ಹರೀಶ್ ಗಾಯನ ಕಾರ್ಯಕ್ರಮದ ರಸದೌತಣ ನೀಡಿತು.

ಮೈಸೂರು ಭಾಗದಲ್ಲಿ ಬಹುದೊಡ್ಡ ಅಭಿಮಾನಿಗಳ ಬಳಗ ಹೊಂದಿರುವ ಖ್ಯಾತ ಚಲನಚಿತ್ರ ನಟ ಡಾಲಿ ಧನಂಜಯ ಅವರು ತಮ್ಮ ಅಭಿನಯದ ಬಡವ ರಾಸ್ಕಲ್ ಚಿತ್ರದ ಹಾಡಿಗೆ ನಡೆಸಿಕೊಟ್ಟ ನೃತ್ಯ ಜನರನ್ನು ರಂಜಿಸಿತು. ಅವರೊಂದಿಗೆ ಚಿತ್ರ ನಟ ಸಚಿನ್ ಚಲುವರಾಯಸ್ವಾಮಿ ಸಹ ಭಾಗಿಯಾಗಿದ್ದರು.

ಭಾನುವಾರ ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಜಿಲ್ಲೆಯ ವಿವಿಧೆಡೆಯ ಹತ್ತಾರು ಕಲಾವಿದರು ಪ್ರದರ್ಶನ ನೀಡಿದರು. ಖ್ಯಾತ ಜಾನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ ಅವರ ಅನೇಕ ಗಾಯನಗಳು ಜನರ ಮನ ಸೆಳೆಯಿತು. ನಂತರ ಜಾನಪದ ಕಲಾವಿದರಾದ ಸವಿತಕ್ಕ, ಹರ್ಷ, ಕಂಬದ ರಂಗಯ್ಯ ಹಾಗೂ ಮಲ್ಲಿಕಾರ್ಜುನ ಕೆಂಕೆರೆ ಕಾರ್ಯಕ್ರಮ ನಡೆಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ರಸದೌತಣಕ್ಕೆ ಪ್ರವಾಸಿಗರು ಕುಣಿದು ಕುಪ್ಪಳಿಸಿದರು.

ತಾಲ್ಲೂಕಿನ ಬಹುತೇಕ ಗ್ರಾಮಗಳಿಗೆ ಹಾಗೂ ಪ್ರವಾಸಿಗರಿಗೆ ಅನುಕೂಲವಾಗುವಂತೆ ಉಚಿತ ಸಾರಿಗೆ ವ್ಯವಸ್ಥೆ ಮಾಡಿದ್ದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ತಾಲ್ಲೂಕಿನ ಹಲಗೂರು, ಕಿರುಗಾವಲು, ಬಿ.ಜಿ.ಪುರ, ಮಳವಳ್ಳಿ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಿಗೆ ನೂರಾರು ಬಸ್ ಮೂಲಕ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಡಿವೈಎಸ್ಪಿ ವಿ.ಕೃಷ್ಣಪ್ಪ ನೇತೃತ್ವದಲ್ಲಿ ನೂರಾರು ಪೊಲೀಸರು ಭದ್ರತೆ ಕಲ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.