ಸಂತೇಬಾಚಹಳ್ಳಿ: ಹೋಬಳಿಯ ಬಿಲ್ಲೇನಹಳ್ಳಿಯ ಗವಿರಂಗನಾಥಸ್ವಾಮಿ ಬ್ರಹ್ಮರಥೋತ್ಸವಕ್ಕೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರು ಪೂಜೆ ಸಲ್ಲಿಸಿದರು.
ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ರಥದ ಕಳಸಕ್ಕೆ ಹಣ್ಣು ಜವನವನ್ನು ಸಮರ್ಪಿಸಿದರು. ರಥದಲ್ಲಿ ವಿರಾಜಮಾನನಾಗಿದ್ದ ಗವಿರಂಗನಾಥಸ್ವಾಮಿಯ ಉತ್ಸವದ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ತಹಶೀಲ್ದಾರ್ ಎಂ.ಶಿವಮೂರ್ತಿ ಮತ್ತು ಸಚಿವ ನಾರಾಯಣಗೌಡ ರಥೋತ್ಸವಕ್ಕೆ ಚಾಲನೆ ನೀಡಿದರು.
ರಥೋತ್ಸವ ಸಂಸ್ಕೃತಿಯ ಪ್ರತಿಬಿಂಬ
ರಥೋತ್ಸವದ ನಂತರ ನಡೆದ ಜಾನಪದ ಕಲಾತಂಡಗಳ ಪ್ರದರ್ಶನಕ್ಕೆ ಚಾಲನೆ ನೀಡಿದ ಸಚಿವ ನಾರಾಯಣಗೌಡ ಮಾತನಾಡಿ, ಜಾತ್ರೆ, ರಥೋತ್ಸವಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದೆ ಎಂದರು.
ಜಾತ್ರೆಯ ಸಂಭ್ರಮದಲ್ಲಿ ಎಲ್ಲರೂ ಒಂದಾಗಿ ಭಾಗವಹಿಸಿ ದೇವರ ದರ್ಶನ ಮಾಡಿ ಶ್ರೀರಥದ ಕಳಸಕ್ಕೆ ಹಣ್ಣು ಜವನವನ್ನು ಸಮರ್ಪಿಸಿದಾಗ ಆಗುವ ಧನ್ಯತಾ ಭಾವಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ರಥೋತ್ಸವದ ಸಂಭ್ರಮದಲ್ಲಿ ಜಾತಿ, ಮತ, ಪಂಥವನ್ನು ಮರೆತು ಒಂದಾಗಿ ಭಾಗವಹಿಸುವುದರಿಂದ ಪರಸ್ಪರ ಪ್ರೀತಿ-ವಿಶ್ವಾಸ ಹಾಗೂ ಬಾಂಧವ್ಯ ವೃದ್ಧಿಯಾಗುತ್ತದೆ ಎಂದರು.
ಕೇಳಿದ್ದನ್ನೆಲ್ಲಾ ಕರುಣಿಸುವ ಗವಿರಂಗಪ್ಪನು ಬೇಡಿ ಬಂದ ಭಕ್ತರನ್ನು ಆಶೀರ್ವದಿಸಿ ಕ್ಷೇತ್ರವನ್ನು ಭೂವೈಕುಂಠವನ್ನಾಗಿಸಿದ್ದಾನೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.