ನಾಗಮಂಗಲ: ನಾವು ದೇವೆಗೌಡರನ್ನು ನಮ್ಮ ರಾಜಕೀಯ ಜೀವನದುದ್ದಕ್ಕೂ ನೋಡುತ್ತಲ್ಲೇ ಬಂದಿದ್ದು, ದೇವೇಗೌಡರಲ್ಲಿದ್ದ ಛಲ, ಬಲ ಮತ್ತು ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯವು ಕುಮಾರಸ್ವಾಮಿ ಅವರಲ್ಲಿ ಕಾಣಿಸುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದರು.
ಪಟ್ಟಣದ ಸೌಮ್ಯಕೇಶವ ಸ್ವಾಮಿ ದೇವಾಲಯಕ್ಕೆ ಸೋಮವಾರ ಸಂಜೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಅವರು ಮಂಡ್ಯದಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ಸೇರಿ ಎಂಡಿಸಿಸಿ ಬ್ಯಾಂಕ್ ಅಧಿಕಾರ ಹಿಡಿರುವುದು ಸಹಜವಾದ ಕ್ರಮವಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅವಸರದ ತೀರ್ಮಾನಗಳು ಸರಿಯಾಗುವುದಿಲ್ಲ. ಈ ಕಾರಣದಿಂದ, ಜೆಡಿಎಸ್ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂದರು.
ಜೊತೆಗೆ ಕಾವೇರಿ ನದಿಯು ಹೇಗೆ ಜಿಲ್ಲೆಯ ಜನರ ಜೀವನಾಡಿಯಾಗಿದೆಯೋ ಅದೇ ರೀತಿ ಮಂಡ್ಯ ಜಿಲ್ಲೆಯ ಜನಕ್ಕೆ ಮಂಡ್ಯ ಸಕ್ಕರೆ ಕಾರ್ಖಾನೆಯು ಬದುಕಿನ ಕಾರ್ಖಾನೆಯಾಗಿದೆ. ಸುಮಾರು 10 ಸಾವಿರ ಟನ್ ಕಬ್ಬನ್ನು ಅರೆಯುವ ಸಾಮರ್ಥ್ಯವಿರುವ ಕಾರ್ಖಾನೆಯನ್ನು ಉಳಿಸಲು ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ಸಹ ಆಸಕ್ತಿ ವಹಿಸಲಿಲ್ಲ. ಅಲ್ಲದೇ ಬಂದಂತಹ ಜವಾಬ್ದಾರಿಯು ಮಂತ್ರಿಗಳು ಸಹ ಅತ್ತ ವಿಶೇಷವಾದ ಗಮನ ನೀಡಲಿಲ್ಲ. ರೈತ ಚಳುವಳಿಗೆ ಹೆಸರುವಾಸಿಯಾದ ಮಂಡ್ಯ ರೈತ ಚಳುವಳಿಯು ಸಹ ಈ ವಿಷಯವಾಗಿ ಬಿಸಿ ಮುಟ್ಟಿಸಲಿಲ್ಲ.ಹಾಗಾಗಿ ಅದು ಇದ್ದ ಹಾಗೆ ನಡೆದುಕೊಂಡು ಹೋಗುತ್ತಿದೆ ಎಂದರು.
ಪ್ರಾಧಿಕಾರ ರಚನೆ ಸರಿಯಲ್ಲ: ಕರ್ನಾಟಕವು ನಿಜಲಿಂಗಪ್ಪ, ಚಂಗಲರಾಯ ರೆಡ್ಡಿ, ಕೆಂಗಲ್ ಹನುಮಂತಯ್ಯ ಅವರ ಕಾಲದಲ್ಲಿ ಏಕೀಕರಣವಾಗಿ, ಭಾಷಾವಾರು ಪ್ರಾಂತ್ಯದ ಆಧಾರದ ಮೇಲೆ ರಚನೆಯಾಗಿದ್ದು, ಕರ್ನಾಟಕ ಅಖಂಡವಾಗಿರಬೇಕು ಎಂದು ಕನ್ನಡಿಗರ ಬಯಕೆಯಾಗಿದೆ. ಆದ್ದರಿಂದ ಅದಕ್ಕೆ ಚ್ಯುತಿಯಾಗುವ ಕೆಲಸವನ್ನು ಮಾಡಬಾರದು. ಬೆಳಗಾವಿಯಲ್ಲಿ ನಾಡುನುಡಿಯ ಬಗ್ಗೆ ಆಗಿಂದಾಗ್ಗೆ ಗಲಾಟೆ ನಡೆಯುತ್ತಿರುತ್ತದೆ. ಅದಕ್ಕೆ ಸರ್ಕಾರ ಅವಕಾಶ ಕೊಡಬಾರದು. ಯಾವುದೋ ಘಳಿಗೆಯಲ್ಲಿ ತೆಗೆದುಕೊಂಡ ತೀರ್ಮಾನವನ್ನು ಮತ್ತೆ ವಿಮರ್ಶಿಸಬೇಕು ಎಂದರು.
ಸಂಪುಟ ವಿಸ್ತರಣೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಗೊತ್ತಿಲ್ಲ. ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾವುಗಳು ಸಹ ನಮಗೊಂದು ಅವಕಾಶ ಕೊಡಿ ಎಂದು ಕೇಳಿದ್ದೇವೆ. ಸಂಪುಟದಲ್ಲಿ ಅವಕಾಶ ಸಿಕ್ಕರೆ ಸಂತಸವಾಗುತ್ತದೆ. ನಾನು ದೇವರಾಜ್ ಅರಸು ಅವರ ಕಾಲದಿಂದಲೂ ರಾಜಕಾರಣ ಮಾಡುತ್ತ ಬಂದಿದ್ದು, ನನಗೂ ಸಾಕಷ್ಟು ಅನುಭವವಿದೆ. ಅವಕಾಶ ಸಿಕ್ಕರೆ ಒಳ್ಳೆಯ ಕೆಲಸ ಮಾಡುತ್ತೇನೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.