ADVERTISEMENT

ಭಾರಿ ಮಳೆ: ಕೆ.ಆರ್.ಪೇಟೆ ಬಸ್ ನಿಲ್ದಾಣ ಜಲಾವೃತ- 14 ಪ್ರಯಾಣಿಕರ ರಕ್ಷಣೆ

ಭಾರಿ ಮಳೆ: ಕೆ.ಆರ್.ಪೇಟೆ ಬಸ್ ನಿಲ್ದಾಣ ಜಲಾವೃತ- 14 ಪ್ರಯಾಣಿಕರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 17:20 IST
Last Updated 30 ಸೆಪ್ಟೆಂಬರ್ 2021, 17:20 IST
ಕತ್ತಲಲ್ಲಿ ಪ್ರಯಾಣಿಕರನ್ನು ರಕ್ಷಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿ ಹರಸಾಹಸ
ಕತ್ತಲಲ್ಲಿ ಪ್ರಯಾಣಿಕರನ್ನು ರಕ್ಷಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿ ಹರಸಾಹಸ   

ಕೆ.ಆರ್‌.ಪೇಟೆ: ಗುರುವಾರ ರಾತ್ರಿ 3 ಗಂಟೆಗೂ ಹೆಚ್ಚು ಕಾಲ ಭಾರಿ ಮಳೆ ಸುರಿದ ಕಾರಣ ಪಟ್ಟಣದ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣ ಜಲಾವೃತ್ತವಾಗಿತ್ತು. ಬಸ್‌ಗೆ ಕಾಯುತ್ತಿದ್ದ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ನಿಲ್ದಾಣದಲ್ಲಿ ಸಿಲುಕಿದ್ದ 14 ಪ್ರಯಾಣಿಕರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದೆ.

ರಾತ್ರಿ 7.30ಕ್ಕೆ ಗಂಟೆಗೆ ಆರಂಭವಾದ ಮಳೆ ರಾತ್ರಿ 10.30ರವರೆಗೂ ಸುರಿಯುತ್ತಲೇ ಇತ್ತು. ಬಸ್‌ಗಾಗಿ ಕಾಯುತ್ತಿದ್ದ ಜನರು ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದರು. ಮಳೆ ಜಾಸ್ತಿಯಾಗುತ್ತಿದ್ದಂತೆ ಬಸ್‌ ನಿಲ್ದಾಣಕ್ಕೆ ನೀರಿನ ಹರಿವು ಹೆಚ್ಚಾಯಿತು, ಜನರು ನಿಲ್ದಾಣದಲ್ಲೇ ಸಿಲುಕಿದರು. ಮಕ್ಕಳು, ಮಹಿಳೆಯರು ಹೊರ ಬರಲು ಸಾಧ್ಯವಾಗದೇ ಪರದಾಡಿದರು. ನಂತರ ಪರಿಸ್ಥಿತಿ ಅರಿತ ಜನರು ನೀರಿನಲ್ಲೇ ನಡೆಯುತ್ತಾ ಹೊರ ಬಂದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೆ.ಸಿ.ನಾರಾಯಣಗೌಡ ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಕಳೆದ 10 ವರ್ಷಗಳಿಂದ ಶಾಸಕರಾಗಿದ್ದರೂ ನಿಲ್ದಾಣವನ್ನು ಸುಧಾರಿಸಲು ಸಾಧ್ಯವಾಗಿಲ್ಲ. ಹಲವು ವರ್ಷಗಳಿಂದ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೂ ಅವರು ನಿಲ್ದಾಣವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಸಾರ್ವಜನಿಕರು ಹಿಡಿಶಾಪ ಹಾಕಿದರು.

ಕೈಕೊಟ್ಟ ಕರೆಂಟ್‌: ಸಂಜೆಯಿಂದ ಮಧ್ಯರಾತ್ರಿವರೆಗೂ ವಿದ್ಯುತ್‌ ಕೈಕೊಟ್ಟ ಪರಿಣಾಮ ಜನರು ಅಂಗಡಿಗಳಲ್ಲೇ ಸಿಲುಕಿಕೊಂಡಿದ್ದರು. ಮಳೆ ನಿಲ್ಲದ ಕಾರಣ ರಾತ್ರಿ ಊಟವೂ ಸಿಗದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಮೊಬೈಲ್‌ ಚಾರ್ಜ್‌ ಇಲ್ಲದೇ ಜನರು ಪರದಾಡಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.