ADVERTISEMENT

‘ಪ್ರಜಾವಾಣಿ’ ವರದಿ ಪರಿಣಾಮ: ಮಹದೇವಪುರದಲ್ಲಿ ಪರಿಶಿಷ್ಟರಿಗೆ ಕ್ಷೌರ

ಶ್ರೀರಂಗಪಟ್ಟಣ: ಮಹದೇವಪುರದಲ್ಲಿ ತೆರೆದ ಅಂಗಡಿಗಳು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 17:52 IST
Last Updated 25 ನವೆಂಬರ್ 2022, 17:52 IST
ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರ ಗ್ರಾಮದಲ್ಲಿ ಪರಿಶಿಷ್ಟರಿಗೆ ಕ್ಷೌರ ಮಾಡುತ್ತಿಲ್ಲ ಎಂಬ ದೂರಿಗೆ ಸಂಬಂಧಿಸಿ ತಹಶೀಲ್ದಾರ್‌ ಶ್ವೇತಾ ಎನ್‌. ರವೀಂದ್ರ ಶುಕ್ರವಾರ ಪೊಲೀಸರ ಜತೆ ತೆರಳಿ ಮುಚ್ಚಿದ್ದ ಕ್ಷೌರದ ಅಂಗಡಿಗಳನ್ನು ತೆರೆಸಿ ಪರಿಶಿಷ್ಟರಿಗೆ ಕ್ಷೌರ ಮಾಡಿಸಿದರು
ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರ ಗ್ರಾಮದಲ್ಲಿ ಪರಿಶಿಷ್ಟರಿಗೆ ಕ್ಷೌರ ಮಾಡುತ್ತಿಲ್ಲ ಎಂಬ ದೂರಿಗೆ ಸಂಬಂಧಿಸಿ ತಹಶೀಲ್ದಾರ್‌ ಶ್ವೇತಾ ಎನ್‌. ರವೀಂದ್ರ ಶುಕ್ರವಾರ ಪೊಲೀಸರ ಜತೆ ತೆರಳಿ ಮುಚ್ಚಿದ್ದ ಕ್ಷೌರದ ಅಂಗಡಿಗಳನ್ನು ತೆರೆಸಿ ಪರಿಶಿಷ್ಟರಿಗೆ ಕ್ಷೌರ ಮಾಡಿಸಿದರು   

ಶ್ರೀರಂಗಪಟ್ಟಣ (ಮಂಡ್ಯ): ‘ಪರಿಶಿಷ್ಟರಿಗೆ ಕ್ಷೌರ ಮಾಡುತ್ತಿಲ್ಲ’ ಎಂಬ ದೂರಿನ ಅನ್ವಯ, ತಾಲ್ಲೂಕಿನ ಮಹದೇವಪುರಕ್ಕೆ ಬುಧವಾರ ತೆರಳಿದ ತಹಶೀಲ್ದಾರ್‌ ಮತ್ತು ಪೊಲೀಸರು ಕ್ಷೌರಿಕರ ಮನವೊಲಿಸಿ ಕ್ಷೌರ ಮಾಡಲು ಒಪ್ಪಿಸಿದರು. ನ.6ರಿಂದ ಮುಚ್ಚಿದ್ದ ಎಲ್ಲ 10 ಅಂಗಡಿಗಳನ್ನು ಮಾಲೀಕರು ತೆರೆದರು.

‘ಜಾತಿಯ ಕಾರಣಕ್ಕೆ ಕ್ಷೌರ ಮಾಡುವುದಿಲ್ಲವೆಂದರೆ ಕ್ರಮ ಜರುಗಿಸಬೇಕಾಗುತ್ತದೆ. ಅಂಗಡಿಗಳ ಪರವಾನಗಿಯೂ ರದ್ದಾಗುತ್ತದೆ. ಅಸ್ಪೃಶ್ಯತೆ ಆಚರಿಸಿದರೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ’ ಎಂದು ತಹಶೀಲ್ದಾರ್‌ ಶ್ವೇತಾ ಎನ್‌.ರವೀಂದ್ರ ಎಚ್ಚರಿಕೆ ನೀಡಿದರು.

ಅವರಿಗೆ ಪ್ರತಿಕ್ರಿಯಿಸಿದ ಕ್ಷೌರಿಕರು, ‘ಪಕ್ಕದ ಊರುಗಳ ಪರಿಶಿಷ್ಟರಿಗೆ ಹಲವು ವರ್ಷಗಳಿಂದ ಕ್ಷೌರ ಮಾಡುತ್ತಿದ್ದೇವೆ. ಆದರೆ, ಮಹದೇವಪುರದ ಅದೇ ಸಮುದಾಯದ ಕೆಲವರು ‘ಜಾತಿ ನಿಂದನೆ ಮಾಡಿದ್ದಾರೆ’ ಎಂದು ನಮ್ಮ ವಿರುದ್ಧವೇ ಪೊಲೀಸರಿಗೆ ಸುಳ್ಳು ದೂರು ನೀಡಿದ್ದಾರೆ. ಅಂಥವರಿಗೆ ಕ್ಷೌರ ಮಾಡಲು ಮನಸ್ಸು ಬರುತ್ತದೆಯೇ?’ ಎಂದು ಪ್ರಶ್ನಿಸಿದರು.

ADVERTISEMENT

ಎರಡೂ ಕಡೆಯ ಮುಖಂಡರೊಂದಿಗೆ ಮಾತನಾಡಿದ ತಹಶೀಲ್ದಾರ್‌, ‘ಹಳೆಯದನ್ನು ಮರೆತು ಸ್ನೇಹ, ವಿಶ್ವಾಸದಿಂದ ಇರಬೇಕು’ ಎಂದರು. ‘ಮತ್ತೆ ನಿರಾಕರಿಸಿದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ’ ಎಂದು ಡಿವೈಎಸ್ಪಿ ಸಂದೇಶಕುಮಾರ್‌ ಸ್ಪಷ್ಟಪಡಿಸಿದರು.

‘ಪರಿಶಿಷ್ಟರಿಗೆ ಕ್ಷೌರ ನಿರಾಕರಣೆ, ಮುಚ್ಚಿದ ಅಂಗಡಿಗಳು’ ವರದಿಯು ‘ಪ್ರಜಾವಾಣಿ’ಯ ನ.25ರ ಸಂಚಿಕೆಯಲ್ಲಿ ಮುಖಪುಟದಲ್ಲಿ ಪ್ರಕಟವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.