ADVERTISEMENT

ಭಾಷಣ ಓದಲು ತಡವರಿಸಿದ ಸಚಿವ ನಾರಾಯಣಗೌಡ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 13:15 IST
Last Updated 15 ಆಗಸ್ಟ್ 2020, 13:15 IST
ಸಚಿವ ಕೆ.ಸಿ.ನಾರಾಯಣಗೌಡ (ಸಂಗ್ರಹ ಚಿತ್ರ)
ಸಚಿವ ಕೆ.ಸಿ.ನಾರಾಯಣಗೌಡ (ಸಂಗ್ರಹ ಚಿತ್ರ)   

ಮಂಡ್ಯ: ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸ್ವಾತಂತ್ರ್ಯೋತ್ಸವದ ವೇಳೆ ಭಾಷಣ ಓದಲು ಪೌರಾಡಳಿತ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ ತಡವರಿಸಿದರು. ತಪ್ಪು ಪದಗಳನ್ನು ಉಚ್ಛಾರ ಮಾಡಿ ಮುಜುಗರ ಉಂಟು ಮಾಡಿದರು.

ಭಾಷಣದ ಆರಂಭದಲ್ಲೇ 74ರ ಬದಲಿಗೆ 77ನೇ ಸ್ವಾತಂತ್ರ್ಯ ದಿನಾಚರಣೆ ಎಂದರು. ಸಾತಂತ್ರ್ಯ ಪಡೆಯಲು 7 ದಶಕಗಳ ಹೋರಾಟ ಮಾಡಲಾಗಿದೆ ಎನ್ನುವ ಬದಲು 7 ಶತಕದ ಹೋರಾಟ ಎಂದರು. ಜಿಲ್ಲೆಯಲ್ಲಿ ಹರಿಯುವ ಲೋಕಪಾವನಿ ನದಿಯನ್ನು ಲೋಕಪಾನಿ ಎಂದು ಉಚ್ಛಾರ ಮಾಡಿದರು. ಒಂದೊಂದು ಪದವನ್ನೂ ತಡವರಿಸುತ್ತಿದ್ದ ಅವರು, ನದಿಗಳು ಹರಿಯುತ್ತಿವೆ ಎನ್ನುವ ಬದಲು ದಿನಗಳು ಹರಿಯುತ್ತಿವೆ ಎಂದರು.

ಮಂಡ್ಯ ಅಭಿವೃದ್ಧಿಗಾಗಿ ಎನ್ನಲು ಮಂಡ್ಯ ಸ್ವತಂತ್ರಕ್ಕಾಗಿ ಎಂದು ತಪ್ಪಾಗಿ ಹೇಳಿದರು. ಕಿಸಾನ್ ಸಮ್ಮಾನ್ ಯೋಜನೆ ಬಗ್ಗೆ ಮಾತನಾಡುವಾಗ ಕಿಶನ್ ಸಮ್ಮುನ್, ಸಂಧ್ಯಾ ಸುರಕ್ಷಾ ಯೋಜನೆಯನ್ನು ಸಂಜೆ ಸುರಕ್ಷಾ, ಆಹಾರಧಾನ್ಯ ಪದವನ್ನು ಆಹಾರಧನ ಎಂದರು.

ADVERTISEMENT

ಅರ್ಪಣಾ ಪದಕ್ಕೆ ಅಪರ್ಣಾ, ಪವಿತ್ರ ಎನ್ನುವ ಬದಲು ಪ್ರಥಮ ಎಂದು ಹೇಳಿದರು. ಊರುಗಳ ಉಚ್ಛಾರಣೆಯನ್ನೂ ತಪ್ಪು ಮಾಡಿದ ಅವರು ಪಾಂಡವಪುರವನ್ನು ಪಾಂಡಪರೆ, ಕೊತ್ತತ್ತಿಯನ್ನು ಕತ್ತತ್ತು ಎಂದರು. ಅಂಕಿಅಂಶ ಓದುವಾಗ ಸಾವಿರಗಳೆಲ್ಲವೂ ಲಕ್ಷವಾಗಿದ್ದವು. ಕಡೆಗೆ, ಅವರ ಪಕ್ಕದಲ್ಲೇ ಇದ್ದ ಪೊಲೀಸ್‌ ಸಿಬ್ಬಂದಿ ಭಾಷಣ ಓದಲು ಸಹಾಯ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.