ಮಂಡ್ಯ: ಸರ್ಕಾರಿ ಮತ್ತು ಖಾಸಗಿ ಕೋಟಾದಡಿ ಲಭ್ಯ ರೋಗಿಗಳ ದಾಖಲಾತಿ ಮತ್ತು ಬಿಡುಗಡೆ ಮಾಹಿತಿಯನ್ನು ಪ್ರತ್ಯೇಕ ರಿಜಿಸ್ಟರ್ನಲ್ಲಿ ನಿರ್ವಹಣೆ ಮಾಡಬೇಕು. ಲಭ್ಯವಿರುವ ಹಾಸಿಗೆಗಳ ಮಾಹಿತಿಯನ್ನು ವ್ಯವಸ್ಥಿತಿವಾಗಿ ದಾಖಲಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ, ಹಾಸಿಗೆ ನಿರ್ವಹಣೆ ನೋಡಲ್ ಅಧಿಕಾರಿ ದಿವ್ಯಾ ಪ್ರಭು ಸೂಚನೆ ನೀಡಿದರು.
ನಗರದ ಹೊರವಲಯದಲ್ಲಿನ ಸ್ಯಾಂಜೋ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ ಕೋವಿಡ್ ರೋಗಿಗಳಿಗೆ ಮೀಸಲಿರಿಸಿದ ಹಾಸಿಗೆಗಳ ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ರೋಗಿಗಳು ದಾಖಲಾಗುವಾಗ ನೀಡುವ ಗುರುತಿನ ಚೀಟಿಗಳಲ್ಲಿರುವ ವ್ಯಕ್ತಿಯೇ ರೋಗಿ ಎಂಬುದನ್ನು ಖಾತರಿ ಪಡಿಸಿಕೊಂಡು ದಾಖಲಿಸಿಕೊಳ್ಳಬೇಕು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಸಸ್ತ್) ಅಡಿಯಲ್ಲಿ ಕೋವಿಡ್ ರೋಗಿಗಳಿಗೆ ಉಚಿತವಾಗಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿಯನ್ನು ಆಸ್ಪತ್ರೆಯ ಪ್ರವೇಶದ್ವಾರದಲ್ಲಿ ಪ್ರದರ್ಶಿಸಬೇಕು. ಸಸ್ತ್ ನಲ್ಲಿ ದಾಖಲಾಗುವ ರೋಗಿಗಳಿಗೆ ಉಚಿತ ವೈದ್ಯಕೀಯ ಸೌಲಭ್ಯ ಸಿಗಬೇಕು. ಯಾವುದೇ ಕಾರಣಕ್ಕೂ ಹಣ ವಸೂಲಾತಿ ಆಗಬಾರದು ಎಂದು ತಾಕೀತು ಮಾಡಿದರು.
ಸರ್ಕಾರಿ ಕೋಟಾದಡಿ ಆಸ್ಪತ್ರೆಯಲ್ಲಿ ಲಭ್ಯ, ಭರ್ತಿ ಮತ್ತು ಖಾಲಿ ಉಳಿದಿರುವ ಹಾಸಿಗೆಗಳ ವಿವರಗಳನ್ನು (ಜನರಲ್ ಬೆಡ್ಸ್, ಎಚ್ಡಿಯು (ಆಕ್ಸಿಜನೆಟೆಡ್ ಬೆಡ್), ಐಸಿಯು ಹಾಗೂ ಐಸಿಯು ವಿತ್ ವೆಂಟಿಲೇಟರ್) ಪ್ರತಿದಿನ ಪ್ರದರ್ಶಿಸಬೇಕು. ಹಾಸಿಗೆ ನಿರ್ವಹಣೆ ವ್ಯವಸ್ಥೆ ಅಡಿ ಜಿಲ್ಲಾ ಪಂಚಾಯಿತಿ ಮೂಲಕ ನೇಮಿಸಿರುವ ಅಧಿಕಾರಿಗಳು ತಮ್ಮ ಪಾಳಿಗಳಲ್ಲಿ ಕಡ್ಡಾಯವಾಗಿ ಕಾರ್ಯ ನಿರ್ವಹಿಸಬೇಕು. ಲಭ್ಯ ಇರುವ ಹಾಸಿಗೆ ಮಾಹಿತಿಯನ್ನು ಪೋರ್ಟಲ್ನಲ್ಲಿ ದಾಖಲಿಸಬೇಕು ಎಂದು ಸೂಚಿಸಿದರು.
ಹಾಸಿಗೆ ನಿರ್ವಹಣೆ ವ್ಯವಸ್ಥೆ ಸಹಾಯಕ ಅಧಿಕಾರಿ ಡಾ.ಪ್ರವೀಣ್, ಡಾ. ಅನಂತ ಶಿಂಧೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.