ಮದ್ದೂರು: ನಟ ಕಮಲ್ ಹಾಸನ್ ಹೇಳಿಕೆಯಿಂದ ನಮ್ಮ ಭಾಷೆಗೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಷ್ ತಿಳಿಸಿದರು.
ಮಂಡ್ಯದಲ್ಲಿ ಈಚೆಗೆ ಮೃತಪಟ್ಟ ತಾಲ್ಲೂಕಿನ ಗೊರವನಹಳ್ಳಿಯ ಮೃತ ಬಾಲಕಿಯ ಮನೆಗೆ ಗುರುವಾರ ಭೇಟಿ ಬಾಲಕಿಯ ಪೋಷಕರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಕನ್ನಡಕ್ಕೆ ತನ್ನದೆಯಾದ ಪ್ರಾಚೀನ ಇತಿಹಾಸವಿದ್ದು, ಹಿರಿಮೆ, ಶ್ರೀಮಂತಿಕೆಯನ್ನು ಹೊಂದಿದೆ. ಅವರು ಈ ರೀತಿ ಹೇಳಿಕೆ ಕೊಡುವ ಮುಂಚೆ ಯೋಚನೆ ಮಾಡಬೇಕಿತ್ತು. ಅವರು ಈ ರೀತಿ ಹೇಳಿರುವುದು ತಪ್ಪು, ಇಷ್ಟಕ್ಕೂ ನಾನು ಭಾಷಾ ತಜ್ಞಳಲ್ಲ. ಆದ್ದರಿಂದ ಹೆಚ್ಚಿಗೆ ಈ ಬಗ್ಗೆ ಮಾತನಾಡಲಾರೆ’ ಎಂದರು.
ಕಮಲ್ ಹಾಸನ್ ಅವರ ಚಿತ್ರಗಳನ್ನು ಕರ್ನಾಟಕದಲ್ಲಿ ನಿಷೇಧ ಮಾಡುವಂತೆ ಕನ್ನಡಪರ ಸಂಘಟನೆಗಳಿಂದ ಒತ್ತಾಯ ಕೇಳಿ ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಯಾವುದೇ ಒಂದು ಸಿನಿಮಾ ಕೇವಲ ಒಬ್ಬರಿಂದಲ್ಲೇ ಆಗುವುದಿಲ್ಲ. ನೂರಾರು ಜನರ ಶ್ರಮ ಇರುತ್ತದೆ. ಈ ಬಗ್ಗೆ ಹೆಚ್ಚು ಮಾತನಾಡಿ ಕಾಂಟರ್ವಸ್ಸಿ (ಗೊಂದಲ) ಮಾಡಲ್ಲ. ಕಮಲ್ ಹಾಸನ್ ಕನ್ನಡಿಗರಲ್ಲಿ ಕ್ಷಮೆ ಕೇಳಿದರೆ ಒಳ್ಳೆಯದು’ ಎಂದರು.
‘ಬಾಲಕಿ ಸಾವಿನ ಪ್ರಕರಣದಲ್ಲಿ ಪೊಲೀಸರಷ್ಟೇ ವೈದ್ಯರದ್ದೂ ತಪ್ಪಿದೆ, ಯಾವುದಕ್ಕೂ ಸೂಕ್ತ ತನಿಖೆಯಾಗಬೇಕು ಎಂದರು.
ಮೃತ ಬಾಲಕಿಯ ಪೋಷಕರಿಗೆ ವೈಯಕ್ತಿಕವಾಗಿ ₹25 ಸಾವಿರ ಚೆಕ್ ಅನ್ನು ವಿತರಿಸಿದರು.
ಹನಕೆರೆ ಶಶಿಕುಮಾರ್, ಶ್ರೇಯಸ್ ಹಾಜರಿದ್ದರು.
‘ಸದ್ಯ ಈಗ ಅಜ್ಜಿಯಾಗಿದ್ದೇನೆ’
‘ಈ ಬಗ್ಗೆ ಬಹಿರಂಗವಾಗಿ ಚರ್ಚಿಸಲು ಇಚ್ಛಿಸುವುದಿಲ್ಲ. ಪಕ್ಷದ ಒಳಗಡೆಯೇ ಚರ್ಚೆ ಮಾಡುತ್ತೇನೆ. ಎಲ್ಲದರ ಬಗ್ಗೆ ಮುಂದಿನ ದಿನಗಳಲ್ಲಿ ಪ್ಲಾನ್ ಮಾಡ್ತೀನಿ. ಸದ್ಯಕ್ಕೆ ಈಗ ಅಜ್ಜಿಯಾಗಿದ್ದೀನಿ ಎಂದ ಅವರು ಮೊಮ್ಮಗನ ಜತೆ ಹೆಚ್ಚು ಸಮಯ ಕಳೆಯುತ್ತಿದ್ದೇನೆ’ ಎಂದು ಬಿಜೆಪಿ ತಮ್ಮನ್ನು ಕಡೆಗಣಿಸುತ್ತಿದ್ದಿಯಾ ಎಂಬ ಪ್ರಶ್ನೆಗೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.