
ಮಂಡ್ಯ: ‘ಕನ್ನಡ ರಾಜ್ಯೋತ್ಸವದ ಆಚರಣೆಯನ್ನು ‘ಕನ್ನಡ ಹಬ್ಬ’ ಎಂಬ ಶೀರ್ಷಿಕೆಯಲ್ಲಿ ಕರ್ನಾಟಕ ರಾಜ್ಯದ ಪರಂಪರೆ ಮತ್ತು ಸಂಸ್ಕೃತಿಯನ್ನು ಸಂಭ್ರಮಿಸುವ ಮೂಲಕ ಆಚರಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಪರಂಪರೆ ಮತ್ತು ಸಂಸ್ಕೃತಿಯಲ್ಲಿ ಶ್ರೀಮಂತ ರಾಜ್ಯವಾಗಿದೆ’ ಎಂದು ಸಾಹಿತಿ ಪ್ರೊ.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಕಾಲೇಜು ಶಿಕ್ಷಣ ಇಲಾಖೆ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ), ಮಂಡ್ಯ ವತಿಯಿಂದ ಮಹಿಳಾ ಸರ್ಕಾರಿ ಕಾಲೇಜಿನ ವನರಂಗದಲ್ಲಿ ಮಂಗಳವಾರ ನಡೆದ ಕನ್ನಡ ಹಬ್ಬ– 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವತಂತ್ರ ಭಾರತದಲ್ಲಿ ಕರ್ನಾಟಕ ರಾಜ್ಯ ನಿರ್ಮಾಣವಾದ ದಿನವನ್ನು ನೆನಪಿಸುವ ದಿನವನ್ನು ‘ಕನ್ನಡ ರಾಜ್ಯೋತ್ಸವ’ ಎಂದು ಆಚರಿಸಲಾಗುವುದು. ಬ್ರಿಟಿಷರು ಭಾರತವನ್ನು ತೊರೆದ ನಂತರ ಭಾರತ ದೇಶದ ಒಳಗೆ ಘರ್ಷಣೆಗಳು ಉಂಟಾದಂತಹ ಸಂದರ್ಭದಲ್ಲಿ ಭಾಷವಾರು ಪ್ರಾಂತ್ಯಗಳ ನಿರ್ಮಾಣವಾದಾಗ ಕನ್ನಡ ರಾಜ್ಯವನ್ನು ಹೆಸರಿಸಲಾಯಿತು ಎಂದು ಇತಿಹಾಸ ವಿವರಿಸಿದರು.
ಕನ್ನಡ ಎಂಬುದು ಕನ್ನಡಿಗರಿಗಲ್ಲದೆ ಭಾರತಕ್ಕೆ ಹಾಗೂ ವಿಶ್ವಕ್ಕೆ ಬೇಕಾಗಿರುವ ಭಾಷೆ. ಕನ್ನಡದ ಪರಂಪರೆ ಇಡೀ ಜಗತ್ತಿಗೆ ಸಾರುವಂತಹದ್ದು ಹಾಗೂ ಕನ್ನಡದ ಸಂಸ್ಕೃತಿ, ಕಲೆ, ಸಾಹಿತ್ಯ, ಭಾಷೆ ಮತ್ತು ಇತಿಹಾಸ ವಿಶ್ವಕ್ಕೆ ಪಸರಿಸುವಂತಹದ್ದು ಎಂದು ಕನ್ನಡ ಭಾಷೆಯ ಮಹತ್ವವನ್ನು ಬಣ್ಣಿಸಿದರು.
ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ), ಪ್ರಾಂಶುಪಾಲರಾದ ಪ್ರೊ.ಗುರುರಾಜ್ ಪ್ರಭು ಕೆ, ಸಾಂಸ್ಕೃತಿಕ ಸಮಿತಿ ಸಂಚಾಲಕ ದಾನೇಗೌಡ, ಗೆಜೆಟೆಡ್ ಮ್ಯಾನೇಜರ್ ರವಿಕಿರಣ್ ಕೆ.ಪಿ, ಹೇಮಲತಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.