ಪಾಂಡವಪುರ: 'ಮಹಾನ್ ನಾಯಕರ ಜಯಂತಿಯನ್ನು ಆಯಾ ಜಾತಿಯ ಜನರು ಆಚರಿಸುತ್ತಿರುವುದು ನಿಜಕ್ಕೂ ದುರಂತ. ಇಂತಹ ನಾಯಕರು ಒಂದು ಜಾತಿಗೆ ಸೀಮಿತವಾದವರಲ್ಲ’ ಎಂದು ನಿವೃತ್ತ ಅಧ್ಯಾಪಕ ವಿ.ವೆಂಕಟರಾಮೇಗೌಡ ಹೇಳಿದರು.
ಪಟ್ಟಣದಲ್ಲಿ ಗುರುವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಮಾತನಾಡಿದ ಅವರು, ‘ಮಹಾತ್ಮರು ಹಾಗೂ ಮಹಾನ್ ಸಾಧಕರು ಮನುಕುಲದ ಆಸ್ತಿ. ಅವರ ದಕ್ಷ ಆಡಳಿತ, ನಿಸ್ವಾರ್ಥ ಸೇವೆ, ತತ್ವ, ಸಿದ್ಧಾಂತ, ಚಿಂತನೆ ಸರ್ವಕಾಲಕ್ಕೂ ಅನುಕರಣೀಯ’ ಎಂದರು.
ಕೆಂಪೇಗೌಡರ ದೂರದೃಷ್ಟಿಯ ಫಲವಾಗಿ ಬೆಂಗಳೂರು ಉದ್ಯೋಗ ನಗರಿ, ಉದ್ಯಾನ ನಗರಿ, ಉದ್ಯೋಗಾಶ್ರಿತರಿಗೆ ಸ್ಥಾನಮಾನ ಕೊಟ್ಟಿರುವ ನಗರಿಯಾಗಿದೆ. ದಕ್ಷಿಣ ಭಾರತದಲ್ಲಿಯೇ ಬೆಂಗಳೂರಿನಂತಹ ಮತ್ತೊಂದು ನಗರವಿಲ್ಲ ಎಂದು ಹೇಳಿದರು.
ತಹಶೀಲ್ದಾರ್ ಪ್ರಮೋದ್ ಎಸ್.ಪಾಟೀಲ ಮಾತನಾಡಿ ‘ನಾಡಪ್ರಭು ಕೆಂಪೇಗೌಡರ ಸಾಧನೆ ನಮಗೆಲ್ಲಾ ಮಾದರಿಯಾಗಿದೆ. ಬೆಂಗಳೂರು ದೇಶದಲ್ಲೇ ಸಿಲಿಕಾನ್ ಸಿಟಿ ಎಂದು ಖ್ಯಾತಿಗೆ ಹೆಸರುವಾಸಿಯಾಗಿದೆ’ ಎಂದು ಬಣ್ಣಿಸಿದರು.
ಉಪ ವಿಭಾಗಾಧಿಕಾರಿ ವಿ.ಆರ್.ಶೈಲಜಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಮಲತಾ, ಉಪಾಧ್ಯಕ್ಷೆ ಲಕ್ಷ್ಮಮ್ಮ ರಂಗಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಅಶೋಕ, ತಿಮ್ಮೇಗೌಡ, ಅನಸೂಯಾ ದೇವರಾಜು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಅಶ್ವತ್ಥ್ ಕುಮಾರಗೌಡ, ಎಪಿಎಂಸಿ ಅಧ್ಯಕ್ಷ ಕುಳ್ಳೇಗೌಡ, ತಾ.ಪಂ. ಇಒ ಆರ್.ಪಿ.ಮಹೇಶ್, ಸಿಪಿಐ ಪಿ.ಎಂ.ರವೀಂದ್ರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.